ADVERTISEMENT

ಭಾರಿ ಮಳೆ: 12 ಮನೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 5:20 IST
Last Updated 1 ಜೂನ್ 2011, 5:20 IST

ಹಗರಿಬೊಮ್ಮನಹಳ್ಳಿ:  ತಾಲ್ಲೂಕಿನಾದ್ಯಂತ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಗೆ ಪಟ್ಟಣದ ನೆಹರು ನಗರದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಯಿತು.

ನೆಹರುನಗರದ ತಗ್ಗುಪ್ರದೇಶದಲ್ಲಿರುವ 12 ಮನೆಗಳು ಜಲಾವೃತಗೊಂಡವು. ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ  ನಿವಾಸಿಗಳು ಮುಂಜಾನೆಯವರೆಗೆ ಜಾಗರಣೆ ಮಾಡುವಂತಾಯಿತು. ಮನೆಯಲ್ಲಿ ಸಂಗ್ರಹಿಸಿದ್ದ ನೀರನ್ನು ಹೊರ ಚೆಲ್ಲಲು ಭಾರಿ ಪ್ರಯಾಸ ಪಡಬೇಕಾಯಿತು.

ಮನ್ಯಾಗೆಲ್ಲಾ ಮೊಳಕಾಲ ಮಟ ನೀರು ನಿಂತೈತ್ರಿ.  ಮನಿ ಕೊಡ್ರಿ, ನಾವು ಬಡವ್ರ ಅದೀವಿ ಅಂತಾ ಕೇಳಿದ್ರೆ ಗೋರ‌್ಮೆಂಟ್ನೋರು ತಗ್ಗನ್ಯಾಗ  ಮನಿ ಕೊಡ್ತಾರ‌್ರಿ. ಮಳೀ ಬಂದ್ರೆ ನಮ್ಮ ಗೋಳು ಕೇಳೋರ‌್ಯಾರು ಇಲ್ಲ ನೋಡ್ರಿ ಎಂದು ಹುಸೇನವ್ವ, ಫಾರೂಕ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.

ಮಜೀದ್‌ಸಾಬ್ ಎಂಬ ಮೀನಿನ ವ್ಯಾಪಾರಿಯೊಬ್ಬರ ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದಲ್ಲದೆ, ಸಂತೆಯಲ್ಲಿ ಮಾರಾಟ ಮಾಡಲೆಂದು ಮನೆಯಲ್ಲಿ ಸಂಗ್ರಹ ಮಾಡಿದ್ದ ರೂ. 40 ಸಾವಿರ ಮೌಲ್ಯದ ಒಣಮೀನುಗಳು ನೀರುಪಾಲಾಗಿವೆ. ಸಾಲ-ಸೋಲ ಮಾಡಿ ಒಣ ಮೀನಿನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ದಿಕ್ಕುತೋಚದಂತಾಗಿದೆ.

ಮಳೆಯ ರಭಸಕ್ಕೆ ಪಟ್ಟಣದಿಂದ ನೆಹರುನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದೆ. ಪಟ್ಟಣದಲ್ಲಿ 85.5ಮಿಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಮಳೆಗಾಲದಲ್ಲಿ ನೀರು ನುಗ್ಗುವುದು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಈ   ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೈಲುಪತ್ತಾರ ಸಂಘದ ಅಧ್ಯಕ್ಷ ಮೌನೇಶ್ ಆಗ್ರಹಿಸಿದ್ದಾರೆ.

ಕುರುಗೋಡಿನಲ್ಲಿ 40 ಎಂ.ಎಂ. ಮಳೆ

ಕುರುಗೋಡು : ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆ ತಂಪನ್ನು ಎರೆಚಿತು.

ಭಾರಿ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ 40 ಎಂ.ಎಂ. ಮಳೆ ದಾಖಲಾಗಿದೆ.

ತಂಪರೆದ ಮಳೆ
ಕೊಟ್ಟೂರು:  ಮಂಗಳವಾರ ಬೆಳಗಿನ ಜಾವ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಮಳೆಗಾಗಿ ಪರಿತಪಿಸುತ್ತಿದ್ದ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆಗೆ ಸಿದ್ದರಾಗಿದ್ದಾರೆ.

ಕೆಲವು ರೈತರು ಹತ್ತಿ ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.  ಹತ್ತಿ ಬೆಳೆಗೆ ಉತ್ತಮ ವಾತಾವರಣ ಹಾಗೂ  ಉತ್ತಮ ಬೆಲೆ ಸಿಕ್ಕಿದ್ದರಿಂದ ಹೆಚ್ಚಿನ ರೈತರು ಹತ್ತಿ ಬೀಜಕ್ಕಾಗಿ ಮುಗಿಬಿದಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.