ಕಂಪ್ಲಿ: ‘ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್.ಎಲ್.ಸಿ) ಈ ತಿಂಗಳಾಂತ್ಯದ ವರೆಗೆ ನಿರಂತರವಾಗಿ ನೀರು ಹರಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಕಾರ್ತಿಕ್ ಒತ್ತಾಯಿಸಿದರು.
ಗುರುವಾರ ಪಟ್ಟಣದಲ್ಲಿ ನಡೆದ ಕಾಲುವೆ ವ್ಯಾಪ್ತಿ ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ಕಾಲುವೆಗೆ ನೀರು ಹರಿಸದೆ ನಿರ್ಲಕ್ಷ್ಯವಹಿಸಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಪ್ರಸ್ತುತ ಕಾಲುವೆ ವ್ಯಾಪ್ತಿಯಲ್ಲಿ 1.32 ಲಕ್ಷ ಕೃಷಿ ಭೂಮಿ ಇದ್ದು, ನೀರು ಸ್ಥಗಿತಗೊಳಿಸಿದಲ್ಲಿ ಕಾಳು ಕಟ್ಟುವ ಹಂತದಲ್ಲಿರುವ ಭತ್ತ ಸೇರಿದಂತೆ ಇತರೆ ಬೆಳೆಗಳು ನೀರಿಲ್ಲದೆ ಒಣಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ನಾರಾಯಣರೆಡ್ಡಿ, ಕಂಪ್ಲಿ ನಗರ ಘಟಕ ಅಧ್ಯಕ್ಷ ಕೆ. ಸುದರ್ಶನ, ಗೌರವ ಅಧ್ಯಕ್ಷ ಅಂಚೆ ಮಾಬುಸಾಬ್, ರೈತ ಮುಖಂಡರಾದ ಚೆಲ್ಲಾ ವೆಂಕಟನಾಯುಡು, ಆದೋನಿ ರಂಗಪ್ಪ, ಕೊಟ್ಟೂರು ರಮೇಶ, ಡಿ. ಮುರಾರಿ, ನಾಯಕರ ತಿಮ್ಮಪ್ಪ, ಗಂಗಣ್ಣ, ರುದ್ರಪ್ಪ, ಅಶ್ವತ್ಥರೆಡ್ಡಿ, ಸೂಗಪ್ಪ, ಕಾಸಿಂಸಾಬ್, ಜಡೆಪ್ಪ, ಧರ್ಮಣ್ಣ, ವಿರೂಪಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.