ಕಂಪ್ಲಿ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಮುಖ್ಯ ಕಾಲುವೆ(ಎಲ್.ಎಲ್.ಸಿ) ವ್ಯಾಪ್ತಿಯ ಹಿಂಗಾರು ಹಂಗಾಮು ಬೆಳೆಗೆ ಮಾರ್ಚ್ 30ರ ವರೆಗೆ ನೀರು ಪೂರೈಕೆ ಮಾಡಲಾಗುವುದು. ಈ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತುಂಗಭದ್ರಾ ಯೋಜನಾ ಅಚ್ಚುಕಟ್ಟು ಪ್ರದೇಶಾಭಿದ್ಧಿ ಪ್ರಾಧಿಕಾರ(ಕಾಡಾ) ಅಧ್ಯಕ್ಷ ಬಸವನಗೌಡ ಬ್ಯಾಗವಾಟ ತಿಳಿಸಿದರು.
ಇಲ್ಲಿಗೆ ಸಮೀಪದ ಬೆಳಗೋಡುಹಾಳು ಗ್ರಾಮದ ವಿಜಯನಗರ ಕಾಲುವೆ ವ್ಯಾಪ್ತಿಯ ರೈತರು ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಂಪ್ಲಿ-ಬೆಳಗೋಡುಹಾಳು ವಿಜಯನಗರ ಕಾಲುವೆಗೆ ಇನ್ನು ಮುಂದೆ ಪ್ರತಿ ನವೆಂಬರ್ನಲ್ಲಿ ಕಾಲುವೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಿ ರೈತರ ಬೇಡಿಕೆಯಂತೆ ಡಿಸೆಂಬರ್ನಲ್ಲಿ ಸರಬರಾಜು ಮಾಡಲಾಗುವುದು ಎಂದು ರೈತರಿಗೆ ತಿಳಿಸಿದರು.
ಮಂಜೂರು: ತುಂಬಾ ಹಳೇಯದಾದ ವಿಜಯನಗರ ಕಾಲುವೆಗಳ ದುರಸ್ತಿ, ಆಧುನಿಕರಣಕ್ಕಾಗಿ ರೂ. 3.50ಕೋಟಿ ಮಂಜೂರಾದ್ದು, ಶೀಘ್ರ ಟೆಂಡರ್ ಆಹ್ವಾನಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮಾಗಾಣಿ ಒಳ ರಸ್ತೆಗಳ ಅಭಿವೃದ್ಧಿಗಾಗಿ ನಬಾರ್ಡ್ ರೂ. 80ಕೋಟಿ ಮಂಜೂರು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಹಳ್ಳಗಳ ದುರಸ್ತಿ, ಹೂಳು ತೆಗೆಯಲು ಮತ್ತು ಬಸಿ ನೀರು ಭೂಮಿ ಫಲವತ್ತತೆಗೆ ರೂ. 124ಕೋಟಿ ಯೋಜನೆ ಸಿದ್ಧಗೊಂಡಿದೆ ಎಂದು ವಿವರಿಸಿದರು.
ಕಂಪ್ಲಿ-ಬೆಳಗೋಡುಹಾಳು ವಿಜಯನಗರ ಕಾಲುವೆ ವ್ಯಾಪ್ತಿಯ ರೈತರ ಬೇಡಿಕೆ ಈಡೇರಿಸಿದ್ದಕ್ಕಾಗಿ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ ಅವರನ್ನು ರೈತರು ಸನ್ಮಾಸಿದರು. ಜಿ. ಲಿಂಗನಗೌಡ, ಮುಖಂಡ ಜಿ. ರಾಜರಾವು, ಅಯೋದಿ ವೆಂಕಟೇಶ್, ಬಿ. ಮಾರುತಿ, ಕೊಲ್ಲಿ ನಾಗೇಶ್ವರಾವ್, ಕಲ್ಯಾಣಿ ದೊಡ್ಡ ಬಸವರಾಜ, ಡಿ. ವಿರೂಪಾಕ್ಷಗೌಡ, ರಾಜಪ್ಪ, ಈರಣ್ಣ, ಬಸಣ್ಣ, ನಾಗರಾಜ, ಚಂದ್ರಪ್ಪ, ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.