ಹೊಸಪೇಟೆ: ಸಹಕಾರಿಗಳ ಮೂಲಕ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವ ಯಶಸ್ವಿನಿ ರೈತ ಆರೋಗ್ಯ ವಿಮಾ ಯೋಜನೆಯ ಸದಸ್ಯತ್ವ ನೋಂದಣಿ ಅಭಿಯಾನ ಜಿಲ್ಲೆಯಾದ್ಯಂತ ಆರಂಭ ವಾಗಿದ್ದು ಹೆಚ್ಚು ಹೆಚ್ಚು ಸಹಕಾರಿಗಳು ನೋಂದಾಯಿಸುವ ಮೂಲಕ ಯೋಜನೆಗೆ ಸ್ಪಂದಿಸಬೇಕಾಗಿದೆ.
ಯಾರು ಫಲಾನುಭವಿಗಳಾಗ ಬಹುದು: ಗ್ರಾಮೀಣ ಕೃಷಿ ಪತ್ತಿನ ಸಹಕಾರಿ, ವಿವಿಧೋದ್ದೇಶ, ಹಾಲು ಮತ್ತು ಕೃಷಿ ಉತ್ಪನ್ನ ಮಾರಾಟ ಸಹಕಾರಿ, ತೋಟಗಾರಿಕಾ, ಹೈನುಗಾರಿಕೆ, ಸಕ್ಕರೆ ಸಹಕಾರಿ, ಭೂ ಅಭಿವೃದ್ಧಿ ಬ್ಯಾಂಕುಗಳು, ಮೀನುಗಾರಿಕೆ, ಬೀಡಿ ಕಾರ್ಮಿಕರು, ನೇಕಾರರು, ಚಲನಚಿತ್ರ ಕಲಾವಿದರು, ರಂಗಭೂಮಿ ಕಲಾವಿದರು, ಜಾನಪದ ಕಲಾವಿದಕರು, ಗ್ರಾಮೀಣ ಪತ್ರಕರ್ತರು, ಅಲೆಮಾರಿಗಳು ಜಿಲ್ಲಾ ಸಹಕಾರಿ ಬ್ಯಾಂಕ್ ಸಂಘಟಿಸಿರುವ ಸ್ವ-ಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಗ್ರಾಮೀಣ ಸೌಹಾರ್ದ ಸಹಕಾರಿ ಗಳಲ್ಲಿ ಸದಸ್ಯತ್ವ ಹೊಂದಿ 6 ತಿಂಗಳು ಕಳೆದ ಸದಸ್ಯರುಗಳು ಯೋಜನೆಯ ವ್ಯಾಪ್ತಿಗೆ ಬರಬಹುದಾಗಿದೆ.
ಕಳೆದ ವರ್ಷದ ಸಾಧನೆ: ಕಳೆದ ವರ್ಷ ಜಿಲ್ಲೆಯಲ್ಲಿ ಒಂದು ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ನಿಗದಿ ಮಾಡಲಾಗಿದ್ದು 80 ಪ್ರತಿಶತ ಸಾಧನೆ ಮಾಡಲಾಗಿದೆ. 80712 ಜನ ಸದಸ್ಯರುಗಳ ಪೈಕಿ 640 ಸದಸ್ಯರು ಲಾಭ ಪಡೆದರೆ, 352 ಸದಸ್ಯರು ಆಸ್ಪತ್ರೆಗಳಲ್ಲಿ ದಾಖಲಾಗಿ 288 ಸದಸ್ಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವುದರ ಮೂಲಕ ರೂ. 68.98 ಲಕ್ಷ ಮೌಲ್ಯದ ಬೇರೆ ಬೇರೆ ಹಂತದ ಚಿಕಿತ್ಸೆಯ ಲಾಭ ಪಡೆದಿದ್ದಾರೆ.
ಹೆಚ್ಚುವರಿ ಚಿಕಿತ್ಸೆ: 6 ವಿಶೇಷ ಪ್ರಕರಣ ಗಳನ್ನು ಗುರುತಿಸಲಾಗಿ ಅಂದಾಜು ಸದಸ್ಯರ ಚಿಕಿತ್ಸಾ ಮೌಲ್ಯದ ವ್ಯಾಪ್ತಿಗೆ ಮೀರಿದ ಕಾಯಿಲೆಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.
ಬಳ್ಳಾರಿ ಜಿಲ್ಲೆಗೆ ಈ ವರ್ಷ 1.10 ಲಕ್ಷ ಗುರಿ ನೀಡಲಾಗಿದ್ದು ಹೆಚ್ಚಿನ ಪ್ರಚಾರ ಮತ್ತು ಮಾಹಿತಿ ನೀಡುವ ಮೂಲಕ ಗುರಿ ತಲುಪಲಾಗುವುದು ಈ ಬಾರಿ ಹೆಚ್ಚುವರಿಯಾಗಿ ಸೌಹಾರ್ದ ಸಹಕಾರಿಗಳು ನೋಂದಣಿಗೆ ಅವಕಾಶ ನೀಡಲಾಗಿದ್ದು ಹೆಚ್ಚಿನ ಆರ್ಥಿಕ ದುರ್ಬಲರಾದವರು ಯೋಜನೆಯ ಲಾಭ ಪಡೆಯಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಸಮನ್ವಯಾಧಿಕಾರಿ ವೀರೇಶ (9342391379) ಆರ್ಥಿಕ ದುರ್ಬಲ ಸಂಜೀವಿನಿಯಾಗಿರುವ ಈ ಯೋಜನೆಯ ಲಾಭ ಪಡೆಯಲು ಹತ್ತಿರದ ಸಹಕಾರಿ ಸಂಘಗಳನ್ನು, ಜಿಲ್ಲಾ ಉಪ ನಿಬಂಧಕರನ್ನು 08392-272635, ಸಹಾಯಕ ನಿಬಂಧಕರನ್ನು ಅಥವಾ ಬಿಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಣಾ ಅಧಿಕಾರಿಯನ್ನು ಸಂಪರ್ಕಿಸಿ ಯೋಜನೆ ಲಾಭ ಪಡೆಯಲು ಕೋರಲಾಗಿದೆ.
ಮುಖ್ಯಾಂಶಗಳು
ಬಳ್ಳಾರಿ ಜಿಲ್ಲೆಯ ಅಂಗೀಕೃತ ಆಸ್ಪತ್ರೆಗಳಲ್ಲಿ ಹಣ ಸಂದಾಯ ಮಾಡದೆ ಚಿಕಿತ್ಸೆ ಪಡೆಯಬಹುದಾಗಿದ್ದು ಈ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ 7 ಆಸ್ಪತ್ರೆಗಳನ್ನು ಅಂಗೀಕೃತವಾಗಿ ಗುರುತಿಸಲಾಗಿದೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆ, ಬಳ್ಳಾರಿ.
ದಾನಮ್ಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಳ್ಳಾರಿ
ಎಸ್.ಆರ್. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬಳ್ಳಾರಿ
ಸತ್ಯಂ ಜನರಲ್ ಆಸ್ಪತ್ರೆ, ಬಳ್ಳಾರಿ
ಎಸ್.ಕೆ.ಪಾಂಡುರಂಗರಾವ್ ಆಸ್ಪತ್ರೆ, ಬಳ್ಳಾರಿ
ಜಿಂದಾಲ್ ಸಂಜೀವಿನಿ ಆಸ್ಪತ್ರೆ, ತೋರಣಗಲ್.
ಶ್ರೀ ಪತಿ ನರ್ಸಿಂಗ್ ಹೋಂ, ಹೊಸಪೇಟೆ
ದೀಪಾಲಿ ಆಸ್ಪತ್ರೆ,
ಉಮಾಕಾಂತ ಕಣ್ಣಿನ ಆಸ್ಪತ್ರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.