ADVERTISEMENT

ಯುವಜನೋತ್ಸವ 27ರಿಂದ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:41 IST
Last Updated 25 ಸೆಪ್ಟೆಂಬರ್ 2013, 6:41 IST

ಬಳ್ಳಾರಿ: ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವತಿಯಿಂದ ಇದೇ 27, 28 ಹಾಗೂ 29ರಂದು ಮೂರು ದಿನಗಳ ಕಾಲ ಸ್ಥಳೀಯ ವೀ.ವಿ. ಸಂಘದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ 10ನೇ ಅಂತರ ಕಾಲೇಜು ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಕೆ. ತೇಜಸ್‌ಮೂರ್ತಿ ತಿಳಿಸಿದರು.

ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ರಾಜ್ಯದ 86 ಕಾಲೇಜುಗಳಲ್ಲಿ 25 ಕಾಲೇಜುಗಳಿಂದ 300ಕ್ಕೂ ಅಧಿಕ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿನಿ­ಯರಿಗೆ ಸಂಘದ ವತಿಯಿಂದ ಊಟ, ವಸತಿ ಹಾಗೂ ಬಸ್‌ ಸಂಚಾರ ವ್ಯವಸ್ಥೆಗೆ ಅನುಕೂಲ ಒದಗಿಸಲಾಗುವುದು ಎಂದು ಹೇಳಿದರು.

ಯುವಜನೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ನಾಟಕ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ಕಲೆ ಸೇರಿದಂತೆ ಐದು ಪ್ರಕಾರಗಳನ್ನು ವಿಂಗಡಿಸಲಾಗಿದ್ದು, ಇದರಲ್ಲಿ 24 ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು, ಪ್ರತಿಯೊಂದು ವಿಭಾಗದಲ್ಲಿಯೂ  ಮೂರು ಬಹುಮಾನ, ಪ್ರತಿಯೊಂದು ಪ್ರಕಾರಗಳಿಗೆ ಎರಡು ಬಹುಮಾನ ಹಾಗೂ ಎಲ್ಲಾ ಪ್ರಕಾರಗಳನ್ನು ಸೇರಿಸಿ, ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ವಿವರಿಸಿದರು.

27ರಂದು ಬೆಳಿಗ್ಗೆ 11ಕ್ಕೆ ಪ್ರಾರಂಭವಾಗುವ ಯುವ­ಜನೋತ್ಸವ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್‌.ಎ. ಖಾಜಿ ಉದ್ಘಾಟಿಸುವರು. ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್‌ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಕಾರ್ಯದರ್ಶಿ­ಗಳಾದ ಗುರುಸಿದ್ದಸ್ವಾಮಿ, ಜೆ.ಎಸ್‌. ನೇಪಾಕ್ಷಪ್ಪ, ಕೋಶಾಧಿಕಾರಿ ಸಂಗನಕಲ್ಲು ಹೀಮಂತರಾಜು ಭಾಗವಹಿಸಲಿದ್ದಾರೆ.  

ಯುವಜನೋತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ಶಾಲೆಯಲ್ಲಿ ಗರಿಷ್ಠ 40 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಅವರು ವಿವರಿಸಿದರು.

29ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಮಹಿಳಾ ವಿವಿಯ ಕುಲಪತಿ ಡಾ.ಮೀನಾ ಚಂದಾವರಕರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋರ್‌, ವಿವಿಯ ಮೌಲ್ಯಮಾಪನ ಕುಲಸಚಿವ ಶ್ರೀನಾಥರಾವ್‌ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಯುವಜನೋತ್ಸವದ ಸಂಯೋಜಕ ಎಸ್‌.ನಾಗರಾಜ್‌, ಡಾ.ಜಿ.ಕೆ. ವಿಶ್ವೇಶ್ವರಪ್ಪ, ಎಂ.ಎಂ.ಕಾಳಮ್ಮ, ಡಾ.ವಿ.ಎಸ್‌. ಪ್ರಭಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.