ADVERTISEMENT

ರೈಲ್ವೆ ಸಚಿವರೊಂದಿಗೆ ಚರ್ಚೆ: ಶಾಂತಾ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 9:20 IST
Last Updated 19 ಜನವರಿ 2011, 9:20 IST
 ಕೊಟ್ಟೂರು : ಕೊಟ್ಟೂರು-ಹರಿಹರ ರೈಲ್ವೆ ಮಾರ್ಗ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ರೈಲ್ವೆ ಸಚಿವ  ಮುನಿಯಪ್ಪ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಲೋಕಸಭಾ ಸದಸ್ಯೆ ಶಾಂತಾ ಭರವಸೆ ನೀಡಿದರು.ಪಟ್ಟಣದಲ್ಲಿ ಮಂಗಳವಾರ ಶಾಸಕ ಕೆ.ನೇಮಿರಾಜ್ ನಾಯ್ಕ ಅವರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ವರ್ಷ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಲೋಕಸಭಾ ಸದಸ್ಯರ ಅನುದಾನದಲ್ಲಿ 24 ಲಕ್ಷ ರೂಪಾಯಿ ಕೊಡಲಾಗಿತ್ತು. ಪ್ರಸಕ್ತ ವರ್ಷ ರೂ. 38 ಲಕ್ಷ ಅಂದಾಜು ವೆಚ್ಚದ  ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಬಸ್ ನಿಲ್ದಾಣ, ಶೌಚಾಲಯ, ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.ಲೋಕಸಭಾ ಸದಸ್ಯರ ಅನುದಾನದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 52 ಲಕ್ಷ  ನೀಡಲಾಗಿದೆ. ಈವರೆಗೆ 3 ಕೋಟಿ ರೂಪಾಯಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆ ಮಾಡಲಾಗಿದೆ  ಎಂದು  ತಿಳಿಸಿದರು.

ಇದಕ್ಕೂ ಮೊದಲು ಶಿರಬಿ ಗ್ರಾಮದಲ್ಲಿ ನಡೆದ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಲೋಕಸಭಾ ಸದಸ್ಯೆ ಜೆ. ಶಾಂತಾ, ಗ್ರಾಮಕ್ಕೆ ಬಸ್ ನಿಲ್ದಾಣ, ಆರೋಗ್ಯ ಘಟಕ, ಮಹಿಳಾ ಶೌಚಾಲಯ ನಿರ್ಮಾಣ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಕೊಡುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯ್ತಿ ನೂತನ ಸದಸ್ಯ ತಿಮ್ಮಲಾಪುರ ಚನ್ನಬಸವನಗೌಡ, ಬಿಜೆಪಿ ಮುಖಂಡ ಸ್ವರೂಪನಂದ, ಶೆಟ್ಟಿ ತಿಂದಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ. ಮದ್ದಾನಪ್ಪ, ವರ್ತಕ ರಾಮಪುರದ ಭರ್ಮಪ್ಪ ಮಾತನಾಡಿದರು.

ತಾಲೂಕು ಪಂಚಾಯ್ತಿ ನೂತನ ಸದಸ್ಯೆ ಕೊಳ್ಳಿ ಹೊನ್ನೂರಮ್ಮ, ಕಾಮಶೆಟ್ಟಿ ಕೊಟ್ರೇಶ, ಮೊರಬದ ನಾಗರಾಜ್, ವಿವೇಕಾನಂದ ಗೌಡ, ಕೊಟ್ರೇಶ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.