ಕೊಟ್ಟೂರು: ಮಹಿಳೆಯರು ತಮ್ಮ ಸ್ವಸಾಮರ್ಥ್ಯದಿಂದ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ ಎಂದು ಶಾಸಕ ನೇಮಿರಾಜ್ ನಾಯ್ಕ ಮುಕ್ತ ಕಂಠದಿಂದ ಹೊಗಳಿದರು. ಪಟ್ಟಣದಲ್ಲಿ ಇಲ್ಲಿನ ಕ್ರಿಯೇಟಿವ್ ಲೇಡಿಸ್ ಕ್ಲಬ್ ಹಮ್ಮಿಕೊಂಡಿದ್ದ 101ನೇ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಅಡುಗೆ ಮನೆಗೆ ಸೀಮಿತ ಎಂಬ ಮಾತು ದೂರವಾಗಿದೆ. ಅವಕಾಶ ಸಿಕ್ಕರೆ ಎಂತಹ ಸಾಹಸಕ್ಕೂ ಕೈ ಹಾಕಬಲ್ಲಳು, ಎಂತಹ ಸಂದರ್ಭವನ್ನು ಎದುರಿಸಬಲ್ಲಳು ಎಂಬುದನ್ನು ನಾವೆಲ್ಲ ಕಂಡಿದ್ದೇವೆ, ಕೇಳಿದ್ದೇವೆ ಎಂದು ತಿಳಿಸಿದರು. ಲೇಡೀಸ್ ಕ್ರಿಯೇಟಿವ್ ಕ್ಲಬ್ನ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಸಕರು ತಮ್ಮ ಮಗಳು ವೈಷ್ಣವಿ ಹೆಸರಿನಲ್ಲಿ ಲೇಡೀಸ್ ಕ್ರಿಯೇಟಿವ್ ಕ್ಲಬ್ಗೆ ಒಂದು ಲಕ್ಷ ರೂಪಾಯಿ ಚೆಕ್ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಣಿ ಮಾಸ್ತನಪ್ಪ ವಹಿಸಿದ್ದರು.
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲೇಡೀಸ್ ಕ್ರಿಯೇಟಿವ್ ಕ್ಲಬ್ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು.
ವೇದಿಕೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಾಸಲ ಸಾವಿತ್ರಮ್ಮ, ಪ.ಪಂ. ಮಾಜಿ ಅಧ್ಯಕ್ಷ ಕಾಮಶೆಟ್ಟಿ ಕೊಟ್ರೇಶ್, ವಿವೇಕಾನಂದಗೌಡ, ಮೀನಾಕ್ಷಮ್ಮ ಮಲ್ಲಿಕಾರ್ಜುನಪ್ಪ, ಮೊರಬದ ನಾಗರಾಜ್ ಮುಂತಾದವರು ಇದ್ದರು.
ಕಾರ್ಯಕ್ರಮದಲ್ಲಿ ಯಜಶ್ರೀ ಲಿಂಗರಾಜ್ ಸ್ವಾಗತಿಸಿದರು. ಕ್ಲಬ್ನ ಕಾರ್ಯದರ್ಶಿ ನಿರ್ಮಲ ಶಿವನಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ್ ಕೊಟ್ರೇಶ್ ನಿರೂಪಿಸಿದರು. ಯಶೋದಾ ಮಾಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.