ADVERTISEMENT

ವಿಜಯನಾಮ ಸಂವತ್ಸವಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:48 IST
Last Updated 13 ಏಪ್ರಿಲ್ 2013, 5:48 IST

ಹೊಸಪೇಟೆ: ಹಿಂದೂಗಳ ನೂತನ ವರ್ಷ `ಯುಗಾದಿ'ಯನ್ನು ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಹೊಸಪೇಟೆಯಲ್ಲಿ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ದಿನವಾಗಿ ಸಂಭ್ರಮದಿಂದ ಆಚರಿಸಲಾಯಿತು.

ನೂತನ ಸಂವತ್ಸರದ ಮೊದಲ ದಿನ ಹೊಸ ವಸ್ತ್ರಧರಿಸಿ ಮಕ್ಕಳು, ಮಹಿಳೆಯರು ಕುಟುಂಬ ಸಮೇತರಾಗಿ ಮನೆಗಳನ್ನು ತಳಿರು ತೋರಣ ಹಾಗೂ ರಂಗೋಲಿಗಳಿಂದ ಸಿಂಗರಿಸಿ, ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನೂತನ ವರ್ಷ ವಿಜಯನಾಮ ಸಂವತ್ಸವನ್ನು ಸ್ವಾಗತಿಸಿದರು.

ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿಗೆ ಪ್ರಾತಃ ಕಾಲದಿಂದಲೇ ವೇದಘೋಷಗಳೊಂದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೂತನ ಸಂವತ್ಸರವಾದ ವಿಜಯನಾಮ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಮರಿದೇವ ಸಂಗೀತ ಮತ್ತು ಸಾಂಸ್ಕೃತಿಕ ಕಲಾವೃಂದ ಸ್ಥಳೀಯ ಕಲಾವಿದರಾದ ಸುಜಾತಾ ಮತ್ತು ಶರಣ ಬಸವ ವಠಾರ ಸಂಗೀತ ಸುಧೆ, ಕೇಶವ ಅವರ ಕೊಳಲನಾದದಲ್ಲಿ ಮೂಡಿಬಂದ ಗಾನಸುಧೆಯ ಮೂಲಕ ವಿಶೇಷ ಅರ್ಥ ನೀಡುವಂತೆ ನೂತನ ಸಂವತ್ಸರವನ್ನು ಸ್ವಾಗತಿಸಿದರು.

ಹಂಪಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್. ಪ್ರಕಾಶರಾವ್ ಅಂಗಡಿ ವಾಮದೇವ ಸೇರಿದಂತೆ  ಹಾಜರಿದ್ದರು. 
ಹೊಸಪೇಟೆಯ ವಡಕರಾಯಸ್ವಾಮಿ ದೇವಸ್ಥಾನ ಸೇರಿದಂತೆ ಬೆಳಿಗ್ಗೆ ನಾಲ್ಕು ವೇದಗಳ ಪಾರಾಯಣ, ವಿಶೇಷ ಪೂಜೆ ಅಭಿಷೇಕ, ಸಂಜೆ ಪಂಚಾಂಗ ಪಠಣ ಕಾರ್ಯಕ್ರಮ  ವೇದ ಪಂಡಿತ ಪಾರ್ಥಸಾರಥಿ ನೇತೃತ್ವದಲ್ಲಿ ನಡೆಯಿತು. ದ್ವಾದಶರಾಶಿಗಳ ವಾರ್ಷಿಕ ಫಲ, ಆಯ-ವ್ಯಯವನ್ನು ಈ ಸಂದರ್ಭದಲ್ಲಿ ಭಕ್ತರಿಗೆ ಶ್ರವಣ ಮಾಡುವಂತೆ ಮಾಡಲಾಯಿತು. 

ವಿಜಯನಾಮ ಸಂವತ್ಸರದ ಪ್ರಯುಕ್ತ ವಡಕರಾಯ ದೇವಸ್ಥಾನದ ವೆಂಕಟರಮಣಸ್ವಾಮಿಗೆ ಅಂದಾಜು 3 ಕೆ.ಜಿ ಬೆಳ್ಳಿಯಿಂದ ಕಿರೀಟ, ಶಂಖ, ಚಕ್ರ, ಕವಜ ಹಾಗೂ ಹಸ್ತ ಆಭರಣಗಳನ್ನು ಸುರೇಶ ಹಾನಗಲ್ಲ ಅವರು ಶ್ರೀಸ್ವಾಮಿಗೆ ಅರ್ಪಿಸಿದರು. ಹೊಸಪೇಟೆಯಲ್ಲಿ ಚಿನ್ನಿ ರಾಮಕುಮಾರ, ಕೆ.ದಿವಾಕರ, ರಮೇಶ ಪುರೋಹಿತ್, ಕೆ. ಉಮಾಶಂಕರಬೋಸ್  ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.