ಬಳ್ಳಾರಿ: ‘ರಾಷ್ಟೀಯ ಸೇವಾ ಯೋಜನೆಯು ಯುವಜನರಲ್ಲಿ ಉತ್ತಮ ವರ್ತನೆ ಮತ್ತು ಸೇವಾ ಮಾನೋಭಾವವನ್ನು ರೂಪಿಸುವುದರ ಜೊತೆಗೆ ರಾಷ್ಟೀಯ ಭಾವೈಕ್ಯತೆಯನ್ನೂ ಮೂಡಿಸುತ್ತದೆ’ ಎಂದು ಯೋಜನೆಯ ವಲಯ ಪ್ರಾದೇಶಿಕ ನಿರ್ದೇಶಕ ಅರುಣ್ ಪೂಜಾರ್ ಅಭಿಪ್ರಾಯಪಟ್ಟರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ರಾಷ್ಟೀಯ ಸೇವಾ ಯೋಜನೆ ಕೋಶ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರದಿಂದ ಆರಂಭವಾದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
‘ಐದು ದಶಕದ ಹಿಂದೆ ದೇಶದ 37 ವಿಶ್ವವಿದ್ಯಾಲಯಗಳು ಯೋಜನೆ ಘಟಕಗಳನ್ನು ಹೊಂದಿದ್ದವು. ಈಗ 750 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಘಟಕ ಸಕ್ರಿಯವಾಗಿವೆ’ ಎಂದರು.
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಪ್ರಭಂಜನ್, ಕುಲಪತಿ ಪ್ರೊ.ಎಂ.ಎಸ್.ಸುಭಾಷ್, ಯೋಜನೆಯ ಸಂಯೋಜಕ ಪ್ರೊ.ಬಸವರಾಜ್ ಬೆಣ್ಣಿ ಮಾತನಾಡಿದರು.
ವಿಶ್ವವಿದ್ಯಾಲಯವು ಇತ್ತೀಚೆಗೆ ಕೊರ್ಲಗೊಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಗ್ರಾಮದ ಮಣಿ ಅಂಜಿನಪ್ಪ ಮತ್ತು ಬಿ.ತಿಮ್ಮರೆಡ್ಡಿ ಅವರನ್ನು ಗಣ್ಯರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಹಣಕಾಸು ಅಧಿಕಾರಿ ಸುನೀಲ್ ಕುಮಾರ್, ಸಿಂಡಿಕೇಟ್ ಸದಸ್ಯ ವರುಣ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.