ADVERTISEMENT

ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ, ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 6:58 IST
Last Updated 16 ಜುಲೈ 2013, 6:58 IST

ಕುರುಗೋಡು: ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಂಘಟಿತ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕ್ರಪ್ಪ ಸಲಹೆ ನೀಡಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ, 17ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಸಂಘಟನೆ ಶಕ್ತಿಯುತವಾಗಲು ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು. ಜನಾಂಗದ ಜಾಗೃತಿಗಾಗಿ ನಿರಂತರವಾಗಿ ಕಾರ್ಯಕ್ರಮ ಆಯೋಜಿಸುವ, ಸಂಘಟನಾ ಸಭೆ ನಡೆಸುವ ಅಗತ್ಯವಿದೆ ಎಂದು ಎಂದು ಹೇಳಿದರು.

ಆಂಧ್ರಪ್ರದೇಶ ಹಿಂದುಳಿದ ವರ್ಗಗಳ ಸಚಿವ ಬಸವರಾಜ ಸಾರಯ್ಯ, ದಕ್ಷಿಣ ಭಾರತದಲ್ಲಿ ಸಮಾಜವನ್ನು ಸಂಘಟನೆ ಮಾಡಿ,  ಸರ್ಕಾರದಿಂದ ಬರಬೇಕಾದ ಸೌಲಭ್ಯ ಪಡೆಯಲು ಹೋರಾಟ ನಡೆಸಬೇಕು ಎಂದು ಹೇಳಿದರು.

ಶಿವಯೋಗಾನಂದ ಪುರಿ ಸ್ವಾಮೀಜಿ, ಎಲ್ಲಾ ಕ್ಷೇತ್ರಗಳಲ್ಲೂ ಮಡಿವಾಳ ಸಮಾಜದವರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುನ್ನಡೆ ಪಡೆಯಬೇಕಾಗಿದೆ. ಇದು ಸಮಾಜದ ಎಲ್ಲರೂ ಶೈಕ್ಷಣಿಕವಾಗಿ ಪ್ರಬಲರಾದಾಗ ಮಾತ್ರ ಸಾಧ್ಯ ಎಂದರು. 

ನೆಲಮಂಗಲದ ಬಸವಮಾಚಿದೇವ ಸ್ವಾಮೀಜಿ, ಮೂಡಬಿದರೆ ಆಂಜಿನೇಯ ಸ್ವಾಮಿ ದೇವಸ್ಥಾನದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಭಾರತ ಮಡಿವಾಳರ ಸಂಘದ ಮಾಜಿ ಉಪಾಧ್ಯಕ್ಷ ಈರಣ್ಣ, ಕೆ.ವಿ. ಅಮರನಾಥ, ರಾಜ್ಯ ಸಂಘದ ಕಾರ್ಯದರ್ಶಿ ಎಚ್.ಟಿ. ರುದ್ರಪ್ಪ, ಕೆ.ವಿ. ಗೋಪಾಲ್, ನರಸಪ್ಪ, ಹುಸೇನಪ್ಪ, ಸಾಯಿಬಣ್ಣ ಮಾತನಾಡಿದರು.

ತಾ.ಪಂ. ಸದಸ್ಯೆ ಚಂದ್ರಾಯಿ ಹನುಮಂತಮ್ಮ, ಗ್ರಾ.ಪಂ. ಅಧ್ಯಕ್ಷೆ ಎನ್. ಸಣ್ಣಮ್ಮ ಬಸವರಾಜ್, ಗ್ರಾ.ಪಂ. ಉಪಾಧ್ಯಕ್ಷೆ ಎಸ್.ಎಂ. ಮಂಗಳಗೌರಿ ವಿರೂಪಾಕ್ಷಯ್ಯ, ಎ. ಬಸವರಾಜ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಆರ್. ತಿಮ್ಮಪ್ಪ, ಎ. ಲೋಕಣ್ಣ, ಎ. ಮಲ್ಲಿಕಾರ್ಜುನ, ಎ. ಮುದುಕಪ್ಪ, ಎ. ಬಸಪ್ಪ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 15 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ಅಲಂಕೃತ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶರಣ ಮಡಿವಾಳ ಮಾಚದೇವರ ಭಾವಚಿತ್ರ ಮತ್ತು ಮಾಚಿದೇವ ಪ್ರಭುಗಳ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT