ADVERTISEMENT

`ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡಿ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:35 IST
Last Updated 6 ಸೆಪ್ಟೆಂಬರ್ 2013, 5:35 IST

ಹಗರಿಬೊಮ್ಮನಹಳ್ಳಿ: `ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಎದುರಾಗುವ ಶೈಕ್ಷಣಿಕ ಸ್ಥಿತ್ಯಂತರಗಳನ್ನು ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ಹೊಂದಬೇಕು. ಅದಕ್ಕೆ ಪೂರಕವಾಗಿ ಎಲ್ಲ ರೀತಿಯ ಸಹಕಾರಗಳನ್ನು ನೀಡಲು ತಾವು ಸಿದ್ಧ. ಬೋಧನಾ ಕಾರ್ಯ ಮತ್ತು ಅದಕ್ಕೆ ಬೆಂಬಲವಾಗಿ ನಡೆವ ಎಲ್ಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಳ್ಳುವ ಮೂಲಕ ಶಿಕ್ಷಕರು ಮಕ್ಕಳ ಕಲಿಕೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.”

ಪಟ್ಟಣದ ಗುರುಭವನದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆಯ ಸಮಿತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 126ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ನೀಡಿದ ಸಂದೇಶದ ಸಾರವಿದು. ಅವರ ಅನುಪಸ್ಥಿತಿಯಲ್ಲಿ ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ ಸಂದೇಶವನ್ನು ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮೀ ಪೂರ‌್ಯಾನಾಯ್ಕ ಸಮಾರಂಭ ಉದ್ಘಾಟಿಸಿದರು. ನಂದೀಪುರ ಮಹೇಶ್ವರ ಸ್ವಾಮೀಜಿ ಮತ್ತು ಹಾಲಶಂಕರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಪನಹಳ್ಳಿಯ ಎಸ್‌ಯುಜೆಎಂ ಕಾಲೇಜಿನ ಉಪನ್ಯಾಸಕ ಎಂ.ಪಿ.ಎಂ.ಶಾಂತವೀರಯ್ಯ ಉಪನ್ಯಾಸ ನೀಡಿದರು.

ಇದಕ್ಕೂ ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಜಾನಪದ ವಾದ್ಯಗಳೊಂದಿಗೆ ಪಟ್ಟಣದ ಹಗರಿ ಆಂಜನೇಯ ದೇವಸ್ಥಾನದಿಂದ ಸಮಾರಂಭ ಆಯೋಜಿಸಿದ್ದ ಗುರುಭವನಕ್ಕೆ ಮೆರವಣಿಗೆಯ ಮೂಲಕ ಕರೆತರಲಾಯಿತು.

ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಜಿ.ಗೋಪ್ಯಾನಾಯ್ಕ ಸಹಿತ ನಿವೃತ್ತ ಶಿಕ್ಷಕರು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ಕೊಟ್ರದೇವರು, ವೀರೇಶ್, ಗುರುಭವನ ನಿವೇಶನದ ದಾನಿ ಆನ್ವೇರಿ ಶ್ರೀನಿವಾಸ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿ.ಪಂ. ಸದಸ್ಯರಾದ ಹೇಮ್ಲಮ್ಮ ಕೃಷ್ಣಾನಾಯ್ಕ, ತಾ.ಪಂ. ಉಪಾಧ್ಯಕ್ಷೆ ಕುರುಬರ ನಾಗರತ್ನಮ್ಮ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಬೆಣಕಲ್ ಪ್ರಕಾಶ್, ಸದಸ್ಯೆ  ಬಿ. ಗಂಗಮ್ಮ ಪವಾಡಿ ಹನಮಂತಪ್ಪ, ಇಓ ಕೇಣಿ ಬಸಪ್ಪ, ಚಿಂತ್ರಪಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ. ಆನಂದ್, ತಹಸೀಲ್ದಾರ್ ಏಜಾಜ್ ಬೇಗ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಜ್ಞಾನೇಶ್ವರಯ್ಯ, ಬಿಇಓ ಕೆ. ರಾಮನಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಟಿ. ತೇನಸಿಂಗನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ. ಜ್ಞಾನೇಶ್ವರಿ, ತಾಲ್ಲೂಕು ಅಧ್ಯಕ್ಷ ಜಿ.ಪ್ರಭುಗೌಡ, ರಾಜ್ಯ ಪರಿಷತ್ ಸದಸ್ಯ ಎಸ್.ವಿ.ಪಾಟೀಲ್, ಪ್ರಾ.ಶಾ.ಶಿ.ಪತ್ತಿನ ಸಂಘದ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ಶಾರದಾ ಮತ್ತು ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಾಣಿಕ್ಯಾಚಾರಿ ಸ್ವಾಗತಿಸಿದರು. ಬಿ.ಕೊಟ್ರಪ್ಪ ವಂದಿಸಿದರು.

`ವೃತ್ತಿಪಾವಿತ್ರತೆ ಕಾಪಾಡಿಕೊಳ್ಳಿ'
ಕುರುಗೋಡು
: `ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಗುರುತರವಾದ ಜವಾಬ್ದಾರಿ ಹೊಂದಿದ ಶಿಕ್ಷಕರು ವೃತ್ತಿಪಾವಿತ್ರತೆ ಕಾಪಾಡಿಕೊಳ್ಳಬೇಕು' ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗಾದಿಲಿಂಗಪ್ಪ ತಿಳಿಸಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇವಲ ಪಠ್ಯದಲ್ಲಿ ಅಡಕವಾಗಿರುವ ವಿಷಯಗಳನ್ನು ಮಾತ್ರ ಬೋಧಿಸಿದರೆ ಶಿಕ್ಷಕರ ಕಾರ್ಯ ಪರಿಪೂರ್ಣವಾಗುವುದಿಲ್ಲ. ಪಠ್ಯಕ್ಕೆ ಪೂರಕವಾದ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಮಾಡಿದರೆ ಮಾತ್ರ ಬೋಧನೆ ಪರಿಣಾಮಕಾರಿಯಾಗಲು ಸಾಧ್ಯ. ಆನಿಟ್ಟಿನಲ್ಲಿ ಶಿಕ್ಷಕರು ಶಾಲಾ ಕೊಠಡಿ ಪ್ರವೇಶಿಸುವ ಮುನ್ನ ಪೂರ್ವ ತಯಾರಿ ನಡೆಸುವುದು ಸೂಕ್ತ ಎಂದು ಸಲಹೆ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕುಮಾರ್ ಸಿಂದಗಿ, ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ವೃತ್ತಿಗೌರವ ಕಾಪಾಡಬೇಕು ಎಂದರು. 

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಲಿಂಗಪ್ಪ, ಸರ್ಕಾರಿ ನೌಕರರ ಸಂಘದ ಸದಸ್ಯ ಎಚ್. ಹುಸೇನ್‌ಬಾಷಾ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷೆ ಸಣ್ಣೆಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಸ್.ಮಂಗಳಗೌರಿ, ತಾ.ಪಂ. ಉಪಾಧ್ಯಕ್ಷೆ ಮರೆಮ್ಮ, ಜಿ.ಪಂ. ಸದಸ್ಯ ವಿ.ಎರ‌್ರಿಸ್ವಾಮಿ, ತಾ.ಪಂ. ಸದಸ್ಯರಾದ ಗಾಳೆಮ್ಮ, ನಾರಾಯಣರೆಡ್ಡಿ,

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪೊಂಪನಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಜಿ.ಶಿವಶಂಕರ್, ಉಪ ಪ್ರಾಚಾರ್ಯ ಎಚ್. ರವೀಂದ್ರ, ಬಾಲಕಿಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ. ಗಂಗಾಧರನಾಯಕ್, ಕ್ಷೇತ್ರ ಸಮನ್ವಯಾಧಿಕಾರಿ ಪಿ.ಎಂ. ಶಿವಕುಮಾರ್, ರಾಮಾಂಜನೇಯಲು ಉಪಸ್ಥಿತರಿದ್ದರು.

ಜಿಲ್ಲಾ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ ಪ್ರೌಢಶಾಲೆ ವಿಭಾಗದ ಟಿ.ಮಲ್ಲಮ್ಮ ಮತ್ತು ಪ್ರಾಥಮಿಕ ಶಾಲಾ ವಿಭಾಗದ ನಾಗರಾಜ ಇವರ ಜೊತೆಗೆ ನಿವೃತ್ತ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಎಚ್. ಮಲ್ಲಿಕಾರ್ಜುನ ನಿರೂಪಿಸಿದರು. ಶಿಕ್ಷಣ ಸಂಯೋಜಕ ಕೆ. ಗಾದಿಲಿಂಗಪ್ಪ ಸ್ವಾಗತಿಸಿದರು. ಬಿ. ಎರ‌್ರಿಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.