ADVERTISEMENT

ಶೈಕ್ಷಣಿಕ ಹಿನ್ನಡೆಯಿಂದ ಪರಾವಲಂಬನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:15 IST
Last Updated 15 ಫೆಬ್ರುವರಿ 2012, 6:15 IST

ಹೊಸಪೇಟೆ: ಸಮಾಜದ ಹಿರಿತನ ಮತ್ತು ಗೌರವವನ್ನು ಎತ್ತಿಹಿಡಿಯುವ ಕೆಲಸ ಪ್ರತಿಯೊಬ್ಬರು ನಿರ್ವಹಿಸಬೇಕು ಎಂದು ಬಳ್ಳಾರಿ ಸಂಸದೆ ಜೆ. ಶಾಂತಾ ಹೇಳಿದರು.

ಮಂಗಳವಾರ ಹೊಸಪೇಟೆಯಲ್ಲಿ ವಾಲ್ಮೀಕಿ ಗುರುಗಳ ಜಿಲ್ಲಾ ಪ್ರವಾಸದ ಆರಂಭಕ್ಕಾಗಿ ಅನಂತಶಯನಗುಡಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ವಾಲ್ಮೀಕಿ ಸಮಾಜದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ತನ್ನ ಶಕ್ತಿ, ತ್ಯಾಗಗಳ ಮೂಲಕ ಗುರುತಿಸಿಕೊಂಡು ಸಾಮಂತರಾಗಿ ಆಳ್ವಿಕೆಯನ್ನು ನಡೆಸುವ ಮೂಲಕ ಮಾದರಿಯಾಗಿ ಮೆರೆದ ನಾವು ಇಂದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುವ ಮೂಲಕ ಪರಾವಲಂಬಿಗಳಂತೆ ವರ್ತಿಸುವ ಸ್ಥಿತಿಗೆ ಬಂದಿರುವುದು ವಿಷಾದನೀಯ” ಎಂದರು.

`ನಾವು ಸಂಘಟಿತರಾಗದಿದ್ದರೆ ಸಮಾಜದ ಅಸ್ತಿತ್ವಕ್ಕೆ ಅಪಾಯವಾಗಲಿದೆ ನಮ್ಮ ಸಾಮರ್ಥ್ಯ ಹಾಗೂ ಶಕ್ತಿಯ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣುವಂತಾಗಬೇಕು~ ಎಂದು ಅವರು ತಿಳಿಸಿದರು.
ಸಮಾಜದ ಮೂಲಕ ಪ್ರಭಾವದಲ್ಲಿರುವ ನಾವು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು.

ಸಂಘಟನೆಯಲ್ಲಿ ತೊಡಗಬೇಕು. ಮುಂದಿನ ಜನಾಂಗವನ್ನು ಶೈಕ್ಷಣಿಕವಾಗಿ ಪ್ರಬಲಗೊಳಿಸುವ ಮೂಲಕ ಸ್ವಾವಲಂಬಿಗಳಾಗಿಸಬೇಕು ಈ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಯತ್ನ ಮಾಡುವಂತೆ ಅವರು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜ ಸಂಘಟನೆಯ ಉದ್ದೇಶದಿಂದ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಪ್ರವಾಸ ಮಾಡುವುದಾಗಿ ತಿಳಿಸಿದರು.


ಇದಕ್ಕೂ ಮುನ್ನ ಸಾಂಪ್ರದಾಯಿಕ ಡೊಳ್ಳು ಕುಣಿತ, ನಂದಿಕೋಲು ವೇಷಧಾರಿಗಳು ಸೇರಿದಂತೆ ಪೂರ್ಣಕುಂಭ ಹೊತ್ತ ಮಹಿಳೆಯರು ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡರು.ಸಮಾರಂಭದಲ್ಲಿ ಹನುಮಂತಪ್ಪ ಪೂಜಾರ್, ಅನಿತಾ ಆನಂದ, ಕೆ.ಪಿ.ರವಿಕುಮಾರ. ಜಿ.ವಿಶ್ವನಾಥ, ಬಿ.ಎಸ್.ಜಂಬಯ್ಯ ನಾಯಕ್, ಅಯ್ಯಾಳಿ ತಿಮ್ಮಪ್ಪ, ಕೆ.ಶಾಂತನಗೌಡ, ಗುಜ್ಜಲ ನಾಗರಾಜ್, ಬ್ಯಾಲಾಳ ಪಂಪಾಪತಿ, ಬಂಡೆ ರಂಗಪ್ಪ ಗೋಸಲ ಭರಮಪ್ಪ, ಉಪನ್ಯಾಸಕ ಕೆ.ಪನ್ನಂಗಧರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.