ADVERTISEMENT

ಸಂವಿಧಾನ ವಿರೋಧಿಗಳಿಗೆ ಸಾಮಾಜಿಕ ಪ್ರಜ್ಞೆ ಇಲ್ಲ

ಜಿಲ್ಲೆಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜೇಂದ್ರ ಪ್ರಸಾದ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 6:44 IST
Last Updated 7 ಡಿಸೆಂಬರ್ 2017, 6:44 IST

ಬಳ್ಳಾರಿ: ‘ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವವರಿಗೆ ಕನಿಷ್ಠ ಸಾಮಾಜಿಕ ಪ್ರಜ್ಞೆಯೂ ಇಲ್ಲ’ ಎಂದು ಪ್ರೊ.ಎನ್‌.ಎಲ್‌.ರಾಜೇಂದ್ರ ಪ್ರಸಾದ್ ಟೀಕಿಸಿದರು.

ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮ
ವಾದ) ಜಿಲ್ಲಾ ಘಟಕವು ಏರ್ಪಡಿಸಿದ್ದ ಬಿ.ಆರ್.ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನಾಚರಣೆ
ಯಲ್ಲಿ ಉಪನ್ಯಾಸ ನೀಡಿದ ಅವರು, ‘ಸಮಾಜದಲ್ಲಿ ಸಮಾನತೆ ನೆಲೆಸಲಿ ಎಂದು ಆಶಯದಿಂದಲೇ ಸಂವಿಧಾನವನ್ನು ರಚಿಸಲಾಗಿದೆ. ಅದನ್ನು ಕೆಲವರು ಅದನ್ನು ಸೀಮಿತ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಸಂವಿಧಾನದ ಮಹತ್ವ ಅವರಿಗೆ ತಿಳಿದಿಲ್ಲ’ ಎಂದು ಆಕ್ಷೇಪಿಸಿದರು.

‘ಲಿಂಗ ತಾರತಮ್ಯದಿಂದ ನೊಂದ ಜ್ಯೋತಿಬಾ ಪುಲೆ ಅವರ ಶಿಕ್ಷಣ ಕ್ರಾಂತಿಯ ಪರಿಣಾಮವಾಗಿಯೇ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು. ಅಂಥವರಿಂದಲೇ ಸಮಾಜ ಸುಧಾರಣೆಗೊಂಡಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಶೋಷಿತರ ದನಿಯಾಗಿದ್ದರು. ಅವರ ಮೂಲ ತತ್ವವೇ ಸಮಾನತೆಯಾಗಿತ್ತು’ ಎಂದರು.

ADVERTISEMENT

‘ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ನೀಡಲೇಬೇಕು ಎಂದು ಸಂವಿಧಾನದಲ್ಲಿ ಪ್ರತಿಪಾದಿಸಿದ್ದರೂ, ಅದಕ್ಕಾಗಿ ಹೋರಾಡಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದು ದುರಂತ’ ಎಂದು ವಿಷಾದಿಸಿದರು.

ಮುಖಂಡರಾದ ವೆಂಕಟಯ್ಯ ಅಪ್ಪಗೆರೆ, ವಿಜಯ ಕುಮಾರ, ಗ್ಯಾನಪ್ಪ, ಬಡಿಗೇರ್, ವಕೀಲರಾದ ಎಚ್‌.ಸಿದ್ದಣ್ಣ, ಪತ್ರಕರ್ತ ಸಿ.ಮಂಜುನಾಥ, ಸಮಿತಿಯ ಜಿಲ್ಲಾ ಸಂಚಾಲಕ ಓಂಕಾರಪ್ಪ ಕಪ್ಪಗಲ್ಲು, ಮಹಿಳಾ ಸಮಿತಿಯ ಜಿಲ್ಲಾ ಸಂಚಾಲಕಿ ಸಾವಿತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.