ADVERTISEMENT

ಸಚಿವ ಬಚ್ಚೇಗೌಡ ಪ್ರಕಟಣೆ:ಬಾಲಕಾರ್ಮಿಕರಿಗೆ ನೂರು ಶಾಲೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 4:50 IST
Last Updated 2 ಮಾರ್ಚ್ 2012, 4:50 IST

ಬಳ್ಳಾರಿ: ಬಾಲಕಾರ್ಮಿಕರಿಗಾಗಿ ರಾಜ್ಯ ದಲ್ಲಿ 100 ವಸತಿಸಹಿತ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎನ್‌ಸಿಎಲ್‌ಪಿ ಯೋಜನೆ ಅಡಿ 17 ಹಾಗೂ ರಾಜ್ಯ ಸರ್ಕಾರದ ಎಸ್‌ಸಿಎಲ್‌ಪಿ ಯೋಜನೆ ಅಡಿ 13 ಶಾಲೆಗಳನ್ನು ಆರಂಭಿಸಲಾಗುವುದು ಎಂದರು.

50 ವಿದ್ಯಾರ್ಥಿಗಳಿಗೆ ಒಂದು ಶಾಲೆ ಯಂತೆ ರೂ 8 ಲಕ್ಷ ಅನುದಾನದಲ್ಲಿ ಒಟ್ಟು 100 ಶಾಲೆಗಳಿಗೆ ರೂ 8 ಕೋಟಿ ಅನುದಾನ ನೀಡಲಾಗುವುದು. ಇದೇ ವೇಳೆ ಶಿಕ್ಷಕರ ವೇತನವನ್ನೂ ಪರಿಷ್ಕರಿಸಲಾಗುವುದು.
 
ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 36 ಸಾವಿರ ಬಾಲ ಕಾರ್ಮಿಕರಿದ್ದು, ಈ ಪೈಕಿ ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಪ್ರಮಾಣದ ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಈ ಮಕ್ಕಳ ಶ್ರೇಯೋಭಿವೃದ್ಧಿಯ ಹಿನ್ನೆಲೆಯಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಲಿದೆ ಎಂದರು.

`ರಾಜ್ಯದ ಕೈಗಾರಿಕೆಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬುದು ನಮ್ಮ ಒತ್ತಾಯವೂ ಆಗಿದೆ. ಸರೋಜಿನಿ ಮಹಿಷಿ ವರದಿಯನ್ನು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕರಿಸಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಚಿವ ಸಂಪುಟವೂ  ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಗೊಂದಲವಿಲ್ಲ: ನಾಯಕತ್ವಕ್ಕೆ ಸಂಬಂಧಿ ಸಿದಂತೆ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ಪಕ್ಷಗಳಲ್ಲಿ ಇರುವಂತೆಯೇ ಪಕ್ಷದಲ್ಲೂ ಸಣ್ಣಪುಟ್ಟ ದೋಷಗಳು, ವ್ಯತ್ಯಾಸಗಳು ಇರುವುದು ಸಹಜ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಜೆಡಿಎಸ್ ನಾಯಕರು ನಿಯಂತ್ರಿಸುತ್ತಾರೆ ಎಂಬ ಮಾತು ಸತ್ಯಕ್ಕೆ ದೂರ. ಸಣ್ಣಪುಟ್ಟ ಜನರ ಹೇಳಿಕೆಗಳಿಗೆ ತಲೆ ಕೆಡಿಸಿ ಕೊಳ್ಳಬೇಕಾದ ಅಗತ್ಯವೂ ಇಲ್ಲ ಎಂದು ಸಚಿವರು ಹೇಳಿದರು. ಮೇಯರ್ ಪಾರ್ವತಿ ಇಂದುಶೇಖರ್ ಉಪಸ್ಥಿತರಿದ್ದರು.

`ನನಗೆ ಗೊತ್ತಿಲ್ಲ, ತಿಳಿದಿಲ್ಲ..~
`ನನಗೆ ತಿಳಿದಿಲ್ಲ~.  `ಮಾಹಿತಿ ಇಲ್ಲ~.  `ಅಧಿಕಾರಿಗಳನ್ನು ಕೇಳುವೆ~.  `ಸ್ಪಷ್ಟ ವಾಗಿ ಗೊತ್ತಿಲ್ಲ.....~
ಕಾರ್ಮಿಕ ಸಚಿವ ಬಚ್ಚೇಗೌಡ ಅವರು ಗುರುವಾರ ಬಳ್ಳಾರಿಯಲ್ಲಿ ಸುದ್ದಿಗಾರರ  ಪ್ರಶ್ನೆಗಳಿಗೆ ನೀಡಿದ ಸಿದ್ಧ ಉತ್ತರಗಳಿವು.

ಜಿಲ್ಲೆಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ನಂತರ ಕಾರ್ಮಿಕರ ಸ್ಥಿತಿ- ಗತಿ, ಬಾಲ ಕಾರ್ಮಿಕರ ಕುರಿತ ಅಂಕಿ- ಅಂಶ ಮತ್ತಿತರ ವಿಷಯಗಳ ಮಾಹಿತಿಗೆ ಸಂಬಂಧಿಸಿದಂತೆ ಕೇಳಲಾದ ವಿವಿಧ ಪ್ರಶ್ನೆಗಳಿಗೆ ಸಚಿವರಿಂದ ಮೇಲಿನ ಉತ್ತರ ಬಂತು.

ಕಾರ್ಮಿಕ ಇಲಾಖೆ ಅಡಿ ನಡೆದ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಸ್ಥಳೀಯ ಶಾಸಕರು ಪಾಲ್ಗೊಳ್ಳದಿರುವ ಕುರಿತು ಕೇಳಿದ ಪ್ರಶ್ನೆಗೂ ಸಚಿವ ಬಚ್ಚೇಗೌಡ ಅವರಿಂದ ಸ್ಪಷ್ಟ ಉತ್ತರ ದೊರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.