ADVERTISEMENT

ಸಮಗ್ರ ಅಭಿವೃದ್ಧಿಗೆ ಯತ್ನ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 5:25 IST
Last Updated 1 ಜೂನ್ 2011, 5:25 IST

ಬಳ್ಳಾರಿ:  ಮೂರು ವರ್ಷಗಳ ಹಿಂದೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ  ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು  ಕೈಗೆತ್ತಿಕೊಂಡಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ನಗರದ ಕೌಲ್‌ಬಝಾರ್ ಬಳಿಯ ಬೆಳಗಲ್ ಕ್ರಾಸ್‌ನಲ್ಲಿ ಸೋಮವಾರ ರಾತ್ರಿ  ನಡೆದ ಸಮಾರಂಭದಲ್ಲಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದ್ದು, ಸಾಕಷ್ಟು ಅನುದಾನವೂ ಬಿಡುಗಡೆಯಾಗಿದೆ. ರಸ್ತೆ ಅಭಿವೃದ್ಧಿಗೆ ರೂ 100 ಕೋಟಿ, ಬೈಪಾಸ್ ರಸ್ತೆಗೆ ರೂ 112 ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಬಳ್ಳಾರಿಯ ಅಭಿವೃದ್ಧಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಅಧಿಕ ಅನುದಾನ ಪಡೆಯಲಾಗಿದೆ. ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಟೀಕಿಸುವ ಕಾರ್ಯ ಕೈಬಿಟ್ಟು  ರಾಜ್ಯದ ಅಭಿವೃದ್ಧಿ ಗಮನಿಸಿ, ಸರ್ಕಾರದ ಜನಪರ ಯೋಜನೆಗಳಿಗೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಬಡ ರೈತರಿಗಾಗಿ ಸುವರ್ಣ ಭೂಮಿ ಯೋಜನೆ ಜಾರಿಗೆ ತರುವ ಮೂಲಕ ಜನಾನುರಾಗಿಯಾಗಿರುವ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ್ದು, ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ವಿನಾಕಾರಣ ಸರ್ಕಾರದ ಹೆಸರು ಕೆಡಿಸುವ ತಂತ್ರದಲ್ಲಿ ವಿರೋಧ ಪಕ್ಷದ ನಾಯಕರು ತೊಡಗಿದ್ದಾರೆ ಎಂದು ಅವರು ಆರೋಪಿಸಿದರು.

ಜೂನ್ ಅಂತ್ಯದೊಳಗೆ ನಗರ ನೀರು ಸರಬರಾಜು ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಂಗನಕಲ್, ಅಲ್ಲಿಪುರ ಕೆರೆಗಳಲ್ಲಿ ಹೆಚ್ಚುವರಿ ನೀರು ಸಂಗ್ರಹಿಸಿ ನಗರಕ್ಕೆ ದಿನದ 24 ಗಂಟೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

ಸಂಸದೆ ಜಿ.ಶಾಂತ, ಮೇಯರ್ ಪಾರ್ವತಿ, ಜಿ.ಪಂ. ಅಧ್ಯಕ್ಷೆ ಅರುಣಾ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜನಗಾ, ಉಪಮೇಯರ್ ಶಶಿಕಲಾ, ಜಿಲ್ಲಾಧಿಕಾರಿ ಎ.ಎ. ಬಿಶ್ವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.