ADVERTISEMENT

`ಸಮಸ್ಯೆಗೆ ಸ್ಪಂದಿಸುವ ಕಲೆ ಉಳಿಯಲು ಸಾಧ್ಯ'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:25 IST
Last Updated 24 ಏಪ್ರಿಲ್ 2013, 6:25 IST

ಹೊಸಪೇಟೆ: `ಇಂದಿನ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಿ ರುವ ಜಾನಪದ ಕಲಾ ಪ್ರಕಾರಗಳು ಮಾತ್ರ ನಿರಂತರವಾಗಿ ಉಳಿಯಲು ಸಾಧ್ಯ' ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನ್ಶನ್ ಸೊಸೈಟಿ ಮತ್ತು ನ್ಯಾಕೋ ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಲಾ ತಂಡಗಳ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.

`ನಮ್ಮ ಜಾನಪದ ಕಲೆಯಲ್ಲಿದ್ದ 180 ಪ್ರಕಾರಗಳಲ್ಲಿ ಇಂದು ಕೇವಲ 40 ರಿಂದ 50 ಕಲಾಪ್ರಕಾರಗಳು ಮಾತ್ರ ಉಳಿದಿವೆ ಅವುಗಳು ಸಹ ಕಾಲಕ್ಕೆ ತಕ್ಕಂತೆ ಬದಲಾಗದಿದ್ದರೆ ಅಸ್ತಿತ್ವ ಮರೀಚಿಕೆ ಯಾಗಲಿದೆ' ಎಂದು ವಿಷಾದಿಸಿದರು.

ಇಂದು ಅನೇಕ ಸರ್ಕಾರಿ ಯೋಜನೆ ಗಳನ್ನು ಜನರಿಗೆ ತಲುಪಿಸುವಲ್ಲಿ ಜಾನಪದರು ಕೊಡುಗೆ ನೀಡುತ್ತಿದ್ದಾರೆ ಆ ಮೂಲಕ ಕಲುಷಿತ ಸಮಾಜವನ್ನು ಸರಿಪಡಿಸಿ ಸಮಾಜದ ಋಣವನ್ನು ತೀರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಜನಾ ನಿರ್ದೇಶಕ ಮನೋಜ ತ್ರಿಪಾಠಿ ಮಾತನಾಡಿ `ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಜನಪದ ಕಲೆಯನ್ನು ಬಳಸಿಕೊಂಡು ರಾಜ್ಯವ್ಯಾಪಿ ನಡೆದ ಜಾಗೃತಿ ಕಾರ್ಯಕ್ರಮ ಪರಿಣಾಮಕಾರಿ ಯಾಗಿದ್ದು ಏಡ್ಸ್ ಏರಿಕೆ ಪ್ರಮಾಣ ಶೇ 50ರಷ್ಟು ಕಡಿಮೆಯಾಗಲು ಕಾರಣವಾಗಿದೆ. ಮುಂದೆ ಯಾವ ರೀತಿಯಾಗಿ ಮಾಡಬೇಕು ಮೂರು ವರ್ಷದಲ್ಲಿ ಹಾಕಿಕೊಳ್ಳ ಬಹುದಾದ ಯೋಜನೆ ಏನು? 3 ಸಾವಿರ ಪ್ರದರ್ಶನಗಳು ಯಾವ ರೀತಿಯಾಗಿರಬೇಕು? ಎಂಬ ರೂಪು ರೇಷೆ ಸಿದ್ಥಪಡಿಸುವುದಾಗಿ ಹೇಳಿದರು.

ಅಲ್ಲದೆ ಪ್ರತಿವರ್ಷ 120 ಕೋಟಿ ಹಣ ಖರ್ಚು ಮಾಡುತ್ತಿರುವ ಯೋಜನೆ ಹಣವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ನ್ಯಾಕೋ ಸಲಹೆಗಾರರಾದ ಸಂಚಾಲಿ ರಾಯ್ ಮಾತನಾಡಿ ಜಾನಪದ ಕಲಾವಿದರಿಂದ ನಡೆಸುತ್ತಿರುವ ಜಾಗೃತಿ ದೇಶಕ್ಕೆ ಮಾದರಿಯಾಗಿದೆ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು. ಚಿಂತಕ ಮೊಗಳ್ಳಿ ಗಣೇಶ, ಜನ್ನಿ ತಮ್ಮ ಮನದಾಳದ ಮಾತುಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಟೀಲ್ ವೇದಿಕೆಯಲ್ಲಿದ್ದರು.ಡಾ.ಲೀಲಾ ಸಂಪಿಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ನಿರೂಪಿಸಿದರು. ಡಾ.ಕರೂರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.