ಹೊಸಪೇಟೆ: ಐತಿಹಾಸಿಕ ಹಂಪಿ ಉತ್ಸವವನ್ನು ಜನವರಿ 27 ರಿಂದ 29 ರವರೆಗೆ 3ದಿನಗಳ ಕಾಲ ವಿಜೃಂಭಣೆಯಿಂದ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಕೈಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಶಿವಪ್ಪ ತಿಳಿಸಿದರು.
ಹೊಸಪೇಟೆಯ ವಿದ್ಯಾರಣ್ಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಹಂಪಿ ಉತ್ಸವವನ್ನು ಅದ್ದೂರಿಯಾಗಿ ನಡೆಸುವ ಉದ್ದೇಶದಿಂದ ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿ, ವಸತಿ ಮತ್ತು ಸಾರಿಗೆ, ಪ್ರಚಾರ, ಮೂಲಸೌಕರ್ಯ ನಿರ್ವಹಣೆ, ಕ್ರೀಡಾಚಟುವಟಿಕೆ, ಮೆರವಣಿಗೆ ನಿರ್ವಹಣಾ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಸಮಿತಿ, ಆಹಾರ ಸಮಿತಿ, ಸ್ತಬ್ಧಚಿತ್ರ ಹಾಗೂ ಮೆರವಣಿಗೆ ಸಮಿತಿಗಳ ರಚನೆ ಮಾಡಲಾಯಿತು ಹಾಗೂ ನಿರ್ವಹಿಸಬೇಕಾದ ಕೆಲಸಗಳನ್ನು ಹಂಚಿಕೆ ಮಾಡಲಾಯಿತು.
ವಸ್ತು ಪ್ರದರ್ಶನ, ಪುಸ್ತಕ ಮಾರಾಟ ಹಾಗೂ ಪ್ರದರ್ಶನ, 6 ವೇದಿಕೆಗಳಲ್ಲಿ ರಾಜ್ಯ, ಅಂತರರಾಜ್ಯ ಹಾಗೂ ದೇಶದ ಪ್ರಮುಖ ಕಲಾವಿದರ ಕಲಾಪ್ರದರ್ಶನ, ಪಾರಂಪರಿಕ ನಡಿಗೆ, ವಿಚಾರ ಸಂಕಿರಣ, ಸಾಂಸ್ಕೃತಿಕ ಹಾಗೂ ಕಲಾಮೇಳಗಳ ಮತ್ತು ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ ಮತ್ತು ಬಾಣ ಬಿರುಸುಗಳ ಪ್ರದರ್ಶನ ಈ ಬಾರಿಯ ವಿಶೇಷವಾಗಿದೆ. 9 ಅಶ್ವ, ಉರಗ ಮತ್ತು ಒಂಟೆಗಳು ಆಕರ್ಷಣೆಯಾಗಲಿದೆ.
ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಸಲು ಶ್ರಮ ವಿಶೇಷ ಕಾಳಜಿ ತೋರಬೇಕು ಎಂದು ಸೂಚಿಸಲಾಯಿತು.
ಅಪರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅನ್ನದಾನಯ್ಯ, ಹಂಪಿ ಪ್ರಾಧಿಕಾರದ ಆಯುಕ್ತ ಹಲಗತ್ತಿ, ಹೆಚ್ಚುವರಿ ಜಿಲ್ಲಾ ಎಸ್ಪಿ ಅಶೋಕ ಕುರೇರ, ಹೊಸಪೇಟೆ ಸಹಾಯಕ ಆಯುಕ್ತ ಕಾಶೀನಾಥ ಪವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿ.ಕೊಟ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.