ADVERTISEMENT

ಹಣ ಪಡೆದಿಲ್ಲ: ಆಣೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:30 IST
Last Updated 7 ಅಕ್ಟೋಬರ್ 2012, 8:30 IST

ಕೊಟ್ಟೂರು: ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಹಣ ಪಡೆದಿಲ್ಲ ಎಂದು ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಜಿ.ಪಂ. ಸದಸ್ಯರಾದ ಭೀಮಾ ನಾಯ್ಕ, ರೋಗಾಣಿ ಹುಲುಗಪ್ಪ, ಕೆ.ಎಂ. ಶಶಿಧರ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

`ನಾವು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಹಣ ಪಡೆದಿರುವುದಾಗಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಈ ಕುರಿತು ಇದೇ 16ರಂದು ನಾವು ಐದು (ಭೀಮಾ ನಾಯ್ಕ, ರೋಗಾಣಿ ಹುಲುಗಪ್ಪ, ಕೆ.ಎಂ. ಶಶಿಧರ, ಮಮತಾ ಸುರೇಶ, ಸುನಂದಾಬಾಯಿ) ಜನ ಜಿ.ಪಂ. ಸದಸ್ಯರು ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಆಣೆ ಮಾಡಲು ಸಿದ್ಧವಾಗಿದ್ದೇವೆ~ ಎಂದು ಹೇಳಿದರು.

ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ನಾವು 5 ಕೋಟಿ ರೂ. ಹಣ ತೆಗೆದುಕೊಂಡಿದ್ದೇವೆ ಎಂದು ಆರೋಪಿ ಸಿರುವ ಹೆಗ್ಡಾಳ್ ರಾಮಣ್ಣ, ಪಿ.ಎಚ್. ದೊಡ್ಡರಾಮಣ್ಣ, ಮರಿಯಮ್ಮನಹಳ್ಳಿ ಕೃಷ್ಣಾ ನಾಯ್ಕ, ಶಿವಯೋಗಿ ಅವರು 16ರಂದು ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಬರಲಿ ಎಂದು ಭೀಮಾ ನಾಯ್ಕ ಸವಾಲು ಹಾಕಿದರು.

ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಏನು ಕಾರ್ಯತಂತ್ರ ರೂಪಿಸಬೇಕು ಎಂಬುದನ್ನು ಕಾಂಗ್ರೆಸ್‌ನ ಅನಿಲ್ ಲಾಡ್, ಸಂತೋಷ ಲಾಡ್, ಎಂ.ಪಿ. ರವೀಂದ್ರ ಅವರೊಂದಿಗೆ ಸಮಾಲೋಚಿಸಿದ್ದೆವು. ಕಾಂಗ್ರೆಸ್ ಸ್ವಂತ ಬಲದ ಮೇಲೆ ಜಿ.ಪಂ. ಅಧಿಕಾರ ಹಿಡಿಯುವಂತಿರಲಿಲ್ಲ. ಬೇರೆ ಪಕ್ಷದ  ನೆರವು ಪಡೆಯ ಬೇಕಿತ್ತು. ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಭೀಮಾ ನಾಯ್ಕ ಹೇಳಿದರು.

ಜಿ.ಪಂ. ಅಧಿಕಾರ ಗದ್ದುಗೆ ಪಡೆಯಲು 16 ಜಿ.ಪಂ. ಸದಸ್ಯರ ಅಗತ್ಯವಿತ್ತು. ಪಕ್ಷಕ್ಕೆ ದ್ರೋಹ ಬಗೆಯಬೇಕು ಎಂಬುದು ನಮ್ಮ ನಮ್ಮ ಉದ್ದೇಶವಾಗಿರಲಿಲ್ಲ ಎಂದು ಹೇಳಿದರು.

ಜಿ.ಪಂ.ನ ಅಧಿಕಾರವನ್ನು ಕಾಂಗ್ರೆಸ್ ಪಡೆಯಬೇಕು ಎಂದು 16 ಜನ ಜಿಲ್ಲಾ ಪಂಚಾಯಿತಿ ಸದಸ್ಯ ಬಯಸಿದ್ದು ತಪ್ಪಾ ಎಂದು ಪ್ರಶ್ನಿಸಿದ ಭೀಮಾನಾಯ್ಕ ವಿನಾಕಾರಣ ನಮ್ಮನ್ನು ಪಕ್ಷದಿಂದ ಅಮಾನತು ಗೊಳಿಸುವಂತೆ ರಾಜ್ಯ ಘಟಕದ ಅಧ್ಯಕ್ಷ ಡಾ. ಪರಮೇಶ್ವರ್‌ಗೆ ಪತ್ರ ಬರೆದಿದ್ದಾರೆ ಎಂದರು.

ಅಮಾನತುಗೊಂಡಿರುವ ಜಿ.ಪಂ. ಸದಸ್ಯ ರೋಗಾಣಿ ಹುಲುಗಪ್ಪ, ಪಕ್ಷದ ನಾಯಕರಾದ ಎಂ.ಎಂ.ಜೆ. ಹರ್ಷವರ್ಧನ, ನಾಗರಕಟ್ಟಿ ರಾಜೇಂದ್ರ ಪ್ರಸಾದ್, ಹಗರಿಬೊಮ್ಮನ ಹಳ್ಳಿ ತಾ.ಪಂ. ಸದಸ್ಯ ಬಾಲು, ಗೂಳಿ ಮಲ್ಲಿಕಾರ್ಜುನ ಮುಂತಾದವರು ಸುದ್ದಿಗೋಷ್ಠಿಯಲ್ಲಿ  ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.