ADVERTISEMENT

ಹಿಂದಿ ದಿವಸಕ್ಕೆ ವಿರೋಧ: ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:40 IST
Last Updated 15 ಸೆಪ್ಟೆಂಬರ್ 2011, 6:40 IST

ಬಳ್ಳಾರಿ: ರಾಜ್ಯದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರಿಗೆ ಒತ್ತಾಯ ಪೂರ್ವಕ ಹಿಂದಿ ಭಾಷೆಯನ್ನು ಹೇರುತ್ತಿರುವುದನ್ನು ನಿಲ್ಲಿಸಬೇಕು, `ಹಿಂದಿ ದಿವಸ್~ ಕಾರ್ಯಕ್ರಮ ರದ್ದು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಭಾರತ ಒಕ್ಕೂಟ ದೇಶವಾಗಿದ್ದು, ಹಲವು ರಾಜ್ಯಗಳು, ವಿವಿಧ ಧರ್ಮ, ಅನೇಕ ಭಾಷೆಯ ಜನರಿಂದ ಕೂಡಿದೆ. ದೇಶಕ್ಕೆ ಅಧಿಕೃತವಾದ ಒಂದೇ ಭಾಷೆ ಇಲ್ಲದಿದ್ದರೂ, ಹಿಂದಿ ಮಾತನಾಡುವ ಜನರ ಕಪಿಮುಷ್ಟಿಯಲ್ಲಿರುವ ಕೇಂದ್ರ ಸರ್ಕಾರ  ಅನಧಿಕೃತವಾಗಿ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕ ಹೇರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇಂದ್ರ ಸರ್ಕಾರವು ಹಿಂದಿಯನ್ನು ರಾಷ್ಟ್ರಭಾಷೆ  ಎಂದು ಸಾರುತ್ತ, ಶಿಕ್ಷಣದ ಮೂಲಕ ಹಿಂದಿಯನ್ನು ಕಡ್ಡಾಯವಾಗಿ ಬಳಸುವಂತೆ ಒತ್ತಡ ಹೇರುತ್ತ, ಹಿಂದಿಯೇತರ ಪ್ರಾದೇಶಿಕ ಭಾಷೆಗಳು ಸಾಯುವಂತೆ ಮಾಡಿ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಅವರು ದೂರಿದರು.

ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಗಳು ತನ್ನ ಸದಸ್ಯರೆಲ್ಲ ಹಿಂದಿಯನ್ನು ತಿಳಿದಿರಬೇಕೆಂಬ ನಿಯಮವನ್ನು ವಿಧಿಸಿ ದೇಶದ ಏಕತೆಗೆ ಭಂಗ ತಂದಿವೆ. ಹಿಂದಿಯನ್ನು ವಿರೋಧಿಸಿ ಹೋರಾಟ ನಡೆಸಿದ ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರದ ಈ ನಿಯಮ ಇಲ್ಲವಾಗಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ ಪ್ರತಿ ವರ್ಷ ಸೆ. 14ರಿಂದ ಹಿಂದಿ ಸಪ್ತಾಹ ಏರ್ಪಡಿಸಿರುವುದು ಖಂಡನೀಯ ಎಂದು ವೇದಿಕೆಯ  ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್ ತಿಳಿಸಿದರು.

ಪ್ರಧಾನ ಸಂಚಾಲಕ ಸಂಗನಕಲ್ಲು ವಿಜಯ್‌ಕುಮಾರ್, ನಗರಘಟಕದ ಅಧ್ಯಕ್ಷ ಪಿ. ಜಗ್ನನಾಥ, ಉಪಾಧ್ಯಕ್ಷರಾದ ಕೆ.ಎಂ. ಶಿವಕುಮಾರ್, ಕಿಶೋರ್, ಸಿರಿಗೇರಿ ರಾಘವೇಂದ್ರ, ಆತ್ಮನಂದರೆಡ್ಡಿ,  ವಿಶ್ವನಾಥ, ಗಾಯಿತ್ರಿ, ಸುಮ, ಭಾಗ್ಯ, ಸೂರ್ಯಪ್ರಕಾಶ್ ರೆಡ್ಡಿ, ಮಹೇಶ್ ಬಣಕಾರ್, ಶಬರಿ ರವಿ, ನಾಗರಾಜ, ಮೃತುಂಜಯ ಸ್ವಾಮಿ, ಕೆ.ಬಿ. ಈಶ್ವರ್, ಜಿ. ತಿಪ್ಪಾರೆಡ್ಡಿ, ಸಿ. ಈಶ್ವರ್ ರಾವ್, ದೇವರಾಜ, ಬೆಳಗಲ್ಲು ಶ್ರೀನಿವಾಸ್, ವಿರೂಪಾಕ್ಷಗೌಡ, ಹುಸೇನ್‌ಸಾಬ್,  ವೀರಾರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.