ADVERTISEMENT

‘ಅಂಬೇಡ್ಕರ್ ಹೆಸರು ಚಿರಸ್ಥಾಯಿ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 9:33 IST
Last Updated 7 ಡಿಸೆಂಬರ್ 2013, 9:33 IST

ಬಳ್ಳಾರಿ: ‘ಶೋಷಿತ ವರ್ಗದವರ ಏಳ್ಗೆಗಾಗಿ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮೌಲ್ಯವನ್ನು ಪ್ರತಿಯೊಬ್ಬರೂ ನಿತ್ಯ ನೆನೆಯುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಬೇಕು’ ಎಂದು ಡಾ.ಬಾಬು ಜಗಜೀವನರಾಮ್‌ ಜನಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಚ್‌.ಕೆಂಚಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಅಂಗವಾಗಿ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ನಾನು ಅನುಭವಿಸಿದ ಯಾತನೆ ನನ್ನಿಂದಲೇ ಕೊನೆಯಾಗಲಿ. ನನ್ನ ಹೋರಾಟವನ್ನು ಅನುಯಾಯಿಗಳು ಮುಂದುವರಿಸಿಕೊಂಡು ಹೋಗಲಿ. ಹೋರಾಟದ ಹಾದಿಯನ್ನು ಎಂದಿಗೂ ಮರೆಯದಿರಲಿ’ ಎಂದು ಸಂದೇಶ ನೀಡಿ ಮಹಾನ್‌ ಚೇತನ ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನು ಶೋಷಿತ ಸಮುದಾಯದವರು ಹಾಗೂ ಪ್ರಜ್ಞಾವಂತ ದಲಿತ ಯುವಕರು ಅನುಸರಿಸಿ, ಅವರ ಕನಸನ್ನು ನನಸಾಗಿಸಬೇಕು ಎಂದು ಅವರು ಹೇಳಿದರು.

ಸಂಕಷ್ಟದ ಜೀವನದಲ್ಲೇ ಶಿಕ್ಷಣ ಪಡೆದು, ದಲಿತರ ಉದ್ಧಾರಕ್ಕೆ ನಿಂತ ಡಾ. ಅಂಬೇಡ್ಕರ್ ಅವರ ಹೋರಾಟ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಪಂಪಾಪತಿ ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಜೆ.ಸುಂಕಣ್ಣ, ಉಪಾಧ್ಯಕ್ಷ ರಾಮಚಂದ್ರಪ್ಪ, ಎಚ್‌.ಎಸ್‌. ಗಾದಿಲಿಂಗಪ್ಪ, ಶ್ರೀನಿವಾಸ, ಎಚ್‌.ಭೀಮಲಿಂಗಪ್ಪ, ಗಂಗಾಧರ, ಆರ್‌.ಗೂಳಪ್ಪ, ಎಚ್‌.ಈರಣ್ಣ, ಎಚ್‌.ವೀರೇಶ, ವೈ.ಅರುಣಾಚಲಂ, ಎಚ್‌.ಹುಲುಗಪ್ಪ, ರಘು, ಪಂಪಾಪತಿ, ಕಿರಣ್‌, ಅನಿಲ್‌ ಹಾಗೂ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಕಾರ್ಮಿಕ ವಿಭಾಗ: ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಕಾಂಗ್ರೆಸ್‌ ಪಕ್ಷದ ಕಾರ್ಮಿಕ ವಿಭಾಗದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಆಚರಿಸಲಾಯಿತು.

ಅಂಬೇಡ್ಕರ್ ಅವರು ದಲಿತ, ಹಿಂದುಳಿದವರ ಹಕ್ಕುಗಳಿಗಾಗಿ ದೃಢನಿರ್ಧಾರ ಕೈಗೊಂಡು ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದಾರೆ. ದಲಿತರೇ ಈ ದೇಶವನ್ನು ಆಳಿದಾಗ ಮಾತ್ರ ಅಂಬೇಡ್ಕರ್‌ ಅವರ ಕನಸು ನನಸಾಗುತ್ತದೆ ಎಂದು ಅಧ್ಯಕ್ಷ ಎಚ್‌.ಅರ್ಜುನ್‌ ತಿಳಿಸಿದರು.
ಅಂಬೇಡ್ಕರ್ ಅವರಂತಹ ದಾರ್ಶನಿಕರ ಹೋರಾಟದ ಫಲವಾಗಿ ದೇಶದಲ್ಲಿ ದಲಿತರು, ಹಿಂದುಳಿದವರಿಗೆ ಸಾಮಾಜಿಕ ಸ್ಥಾನಮಾನಗಳು ದೊರೆತಿದ್ದು, ಗೌರವಾನ್ವಿತ ಜೀವನ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಕಾರ್ಯದರ್ಶಿ ಯತೇಂದ್ರ, ಮಾದಿಗ ದಂಡೋರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸಂಗನಕಲ್ಲು, ಆರ್‌.ಮಹಮದ್‌ ಅಜಾಮ್‌, ಎಂ.ಲಕ್ಷ್ಮಿಕಾಂತ್‌, ಟಿ.ದುರುಗೇಶ, ಬಿ.ಎಸ್‌. ಕುಮಾರಸ್ವಾಮಿ, ಸತ್ಯವಾಣಿ, ಪರಶುರಾಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.