ಬಳ್ಳಾರಿ: ಜಾಗತೀಕರಣದ ದುಷ್ಪರಿಣಾಮದಿಂದ ಗ್ರಾಮೀಣ ಜನರ ಕುಲಕಸುಬು ಮರೆಯಾಗುತ್ತಿದ್ದು, ಗುಡಿ ಕೈಗಾರಿಕೆ ಮೂಲಕ ತಯಾರಿಸಿದ ವಸ್ತುಗಳ ಬೇಡಿಕೆ ಕುಸಿದಿದೆ. ಇದರಿಂದಾಗಿ ಅವಲಂಬಿತರೆಲ್ಲ ಪರಾವಲಂಬಿ ಜೀವನ ನಡೆಸುವಂತಾಗಿದೆ ಎಂದು ಕಥೆಗಾರ ಡಾ.ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.
ನಗರದ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರಜ್ಞೆ ಪ್ರತಿಷ್ಠಾನ ಏರ್ಪಡಿಸಿದ್ದ ‘ಮಹನೀಯರೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಜನರ ಕುಲಕಸುಬಿನ ಕೌಶಲ, ಸೃಜನಶೀಲತೆ ಮಾಯ ಆಗುತ್ತಿರುವುದಕ್ಕೆ ಜಾಗತೀಕರಣ ಹಾಗೂ ಉದಾರೀಕರಣ ನೀತಿಯೇ ಪ್ರಮುಖ ಕಾರಣ ಎಂದು ಅವರು ದೂರಿದರು.
ಕನ್ನಡ ಕಳ್ಳುಬಳ್ಳಿಯ ಭಾಷೆ. ಲೇಖಕರಲ್ಲಿ ವಿನೂತನ ಆಯಾಮ ಹಾಗೂ ಚಿಂತನೆ ರೂಪುಗೊಳ್ಳಬೇಕಾದರೆ ಮಾತೃಭಾಷೆಯ ಅಧ್ಯಯನದ ಅಗತ್ಯವಿದೆ. ಉತ್ತಮ ಸಾಹಿತಿಯಾಗಿ ಹೊರಹೊಮ್ಮಬೇಕಾದರೆ ಮಾತೃಭಾಷೆಯನ್ನೇ ಬಳಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಯುವ ಬರಹಗಾರರು ಅನೇಕ ಸವಾಲು ಎದುರಿಸುತ್ತಿದ್ದು, ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಕತೆ, ಕಾದಂಬರಿ ರಚಿಸುವ ಪ್ರಯತ್ನ ಮಾಡಿದರೆ ಉತ್ತಮ ಲೇಖಕರಾಗಿ ಚಿರಪರಿಚಿತರಾಗಲು ಸಾಧ್ಯ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಸಣ್ಣಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಟಿ. ಮಲ್ಲೇಶಪ್ಪ, ಅಸುಂಡಿ ನಾಗರಾಜಗೌಡ, ಡಾ.ಸಂಪಿಗೆ ನಾಗರಾಜ್, ಪ್ರಾಚಾರ್ಯ ಸತೀಶ್ ಹಿರೇಮಠ, ಉಪನ್ಯಾಸಕಿ ಸುಶೀಲಾ ಶಿರೂರ್, ವೀರೇಂದ್ರ ರಾವಿಹಾಳ್, ಈ.ಜಿ. ರೆಡ್ಡಿ, ಕಳಕಪ್ಪಗೌಡ, ಈರಮ್ಮ, ಎ. ಮಲ್ಲಿಕಾರ್ಜುನ, ವೈ. ಹನುಮಂತರೆಡ್ಡಿ, ಟಿ. ಗುರುರಾಜಾಚಾರ್, ರಫೀಕ್ ಸಿಡಗಿನಮೊಳೆ ಹಾಜರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಸಿದ್ದರಾಮ ಕಲ್ಮಠ ಸ್ವಾಗತಿಸಿದರು. ಟಿ.ಎಂ.ಪಂಪಾಪತಿ ನಿರೂಪಿಸಿದರು. ಆರ್.ಪಿ. ಮಂಜುನಾಥ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.