ADVERTISEMENT

‘ಮುಂದಿನ ಚುನಾವಣೆಯಲ್ಲಿ ನನ್ನ ಯೋಗ್ಯತೆ ನಿರ್ಧಾರ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:50 IST
Last Updated 25 ಸೆಪ್ಟೆಂಬರ್ 2013, 6:50 IST

ಹೂವಿನಹಡಗಲಿ: ‘ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ ಜನಪ್ರಿಯತೆ ಕಾರಣದಿಂದ ನಾವು ಈ ಬಾರಿ ಹೆಚ್ಚು ಬಹುಮತ ಗಳಿಸಲು ಸಾಧ್ಯವಾಗಿತ್ತು. ನನ್ನ ಯೋಗ್ಯತೆ ಮುಂದಿನ ಚುನಾವಣೆಯಲ್ಲಿ ನಿರ್ಧಾರವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಸಮಾಜ ಮಂಗಳವಾರ ಹಮ್ಮಿಕೊಂಡಿದ್ದ ಸಚಿವ, ಶಾಸಕರ ಅಭಿನಂದನೆ, ಶ್ರೀಗಳ ತುಲಾಭಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ‘ಅಭಿವೃದ್ಧಿ ವಿಷಯದಲ್ಲಿ ಎಂ.ಪಿ.ಪ್ರಕಾಶರನ್ನು ಸರಿಗಟ್ಟಲು ಸಾಧ್ಯವಾಗದಿರಬಹುದು. ಆದರೆ ಅವರ ಗೌರವಕ್ಕೆ ಧಕ್ಕೆ ತರದಂತೆ ಜನರ ವಿಶ್ವಾಸ ಗಳಿಸಿ, ಕಾರ್ಯ ನಿರ್ವಹಿಸುತ್ತೇನೆ’ ಎಂದು ತಿಳಿಸಿದರು.

ವಾಲ್ಮೀಕಿ ಭವನ ಸುತ್ತ ರಕ್ಷಣಾ ಗೋಡೆಗೆ ರೂ.10 ಲಕ್ಷ ಅನುದಾನ, ವಾಲ್ಮೀಕಿ ಗುರುಪೀಠಕ್ಕೆ ಐಟಿಐ ಕಾಲೇಜು ಮುಂಜೂರಾತಿಯ ಭರವಸೆ ನೀಡಿದ ಸಚಿವರು, ಪ.ಪಂಗಡ ಮೀಸಲಾತಿ­ಯನ್ನು  ಶೇ 7.5ಕ್ಕೆ ಏರಿಸಲು ಮುಖ್ಯಮಂತ್ರಿ­ಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಸಮಾಜದ ಗೌರವ ಸ್ವೀಕರಿಸಿದ ಶಾಸಕ ಎಂ.ಪಿ.ರವೀಂದ್ರ ಮಾತನಾಡಿ, ಸೂಕ್ಷ್ಮ ರಾಜಕೀಯ ಕ್ಷೇತ್ರದಲ್ಲಿ ಸಾಂಸ್ಕೃತಿಕವಾಗಿ ಜಾತ್ಯತೀತ ಮನಸ್ಸು ಕಟ್ಟುವ ಕೆಲಸ ಆಗಬೇಕಾಗಿದೆ. ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರೊಂದಿಗೆ ಚರ್ಚಿಸಿ ವಾಲ್ಮೀಕಿ ಭವನ ಕಟ್ಟಡಕ್ಕೆ ಹೆಚ್ಚುವರಿಯಾಗಿ ರೂ.1 ಕೋಟಿ ಅನುದಾನ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮತ್ತು ಹಡಗಲಿ ಗವಿಮಠದ ಹಿರಿಶಾಂತವೀರ ಸ್ವಾಮೀಜಿಗಳ ತುಲಾಭಾರ ನೆರವೇರಿತು. ಬಳ್ಳಾರಿ ವಿ.ವಿ. ಕುಲಸಚಿವ ಡಾ. ರಂಗರಾಜ ವನದುರ್ಗ, ಧರ್ಮದರ್ಶಿ ಬಿ.ಎಸ್. ಜಂಬಯ್ಯ ಮಾತನಾಡಿದರು. ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಎಲ್.ಜಿ. ಹೊನ್ನಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಎಚ್.ಕೆ.ಹಾಲೇಶ, ಎಪಿಎಂಸಿ ಅಧ್ಯಕ್ಷ ವಾರದ ಗೌಸಮೊಹಿದ್ದೀನ್, ಜಿ.ಪಂ. ಸದಸ್ಯ ಜಿ. ವಸಂತ, ಮುಖಂಡರಾದ ಗುಜ್ಜಲ ರಘು, ಕೆ. ಕೊಟ್ರೇಶಪ್ಪ, ಎನ್. ಕೋಟೆಪ್ಪ, ದೀಪದ ಕೃಷ್ಣಪ್ಪ, ನಿವೃತ್ತ ಎಂಜಿನಿಯರ್ ವೆಂಕಟೇಶ್ವರ  ಉಪಸ್ಥಿತರಿದ್ದರು.

ಪುರಸಭೆಗೆ ಆಯ್ಕೆಯಾಗಿರುವ ಯು. ಹನುಮಂತಪ್ಪ, ಯು. ಲಲಿತಮ್ಮ, ನೌಕರರ ಸಂಘಕ್ಕೆ ಆಯ್ಕೆಯಾಗಿರುವ ಸಿ.ಸಿ. ಪ್ರೇಮಾ, ಚಿಂತಿ ವಿಶ್ವನಾಥ, ಜೆ. ಪರಸಪ್ಪ ಅವರನ್ನು ಸನ್ಮಾನಿಸಲಾಯಿತು.

ಪ್ರಕಾಶ ಜೈನ್ ಪ್ರಾರ್ಥನೆ ಹಾಡಿದರು. ಯು. ಹನುಮಂತಪ್ಪ ಸ್ವಾಗತಿಸಿದರು. ಟಿ. ಪರ­ಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಪರಸಪ್ಪ ನಿರೂಪಿಸಿದರು. ಬಿ. ಶಿವಾನಂದಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.