ಹೊಸಪೇಟೆ: ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಬಿರದಲ್ಲಿ 102 ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು
ಇದಕ್ಕೂ ಮುನ್ನ ಶಿಬಿರ ಉದ್ಘಾಟಿಸಿದ ವಿಜಯನಗರ ಕಾಲೇಜಿನ ಪ್ರಾಚಾರ್ಯ ವಿ.ಎಸ್. ಪ್ರಭಯ್ಯ, ‘ಜೀವ ರಕ್ಷಣೆಗೆ ಕಾರಣವಾಗುವ ರಕ್ತದಾನದಂತಹ ಮಹತ್ವದ ಕೆಲಸಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕು. ಬೇರೋಬ್ಬರ ಜೀವ ಉಳಿಸುವ ದೊಡ್ಡ ಕೆಲಸ’ ಎಂದರು.
‘18ರಿಂದ 60 ವರ್ಷ ವಯಸ್ಸಿನೊಳಗಿನ, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವ 50 ಕೆ.ಜಿ. ತೂಕದ ವ್ಯಕ್ತಿಗಳು ರಕ್ತದಾನಕ್ಕೆ ಅರ್ಹರು. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಐದರಿಂದ ಆರು ಲೀಟರ್ ರಕ್ತ ಇರುತ್ತದೆ. ಅದರಲ್ಲಿ 350 ಮಿ.ಲೀ. ರಕ್ತ ಕೊಡಬಹುದು. ದೇಶದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ’ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಎಸ್.ಎಂ.ಶಶಿಧರ್, ‘ರಕ್ತಕ್ಕೆ ಬೇರೆ ಪರ್ಯಾಯವಿಲ್ಲ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ. ಆದರೆ, ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಎಷ್ಟೇ ಕೋಟಿ ಕೊಟ್ಟರೂ ರಕ್ತ ಸೃಷ್ಟಿ ಮಾಡಲಾಗುವುದಿಲ್ಲ. ಹೀಗಾಗಿ ರಕ್ತದಾನದ ಮೂಲಕ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು’ ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಜಕ ಆರ್. ನವೀನ್, ಪ್ರತಾಪ್ ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.