ಅರಸೀಕೆರೆ: ಹೋಬಳಿಯ ನೆಲಗೊಂಡನಹಳ್ಳಿ ಗ್ರಾಮದ ರೈತ ಎನ್.ಟಿ.ಮರುಳಸಿದ್ದಪ್ಪ ಅವರಿಗೆ ಸೇರಿದ 12 ಎಕರೆ ಕಟಾವು ನಡೆಯುತ್ತಿದ್ದ ಮೆಕ್ಕೆಜೋಳದ ಬೆಳೆಯು ಬುಧವಾರ ಆಕಸ್ಮಿಕ ಬೆಂಕಿಯಿಂದ ಸುಟ್ಟುಹೋಗಿದೆ.
ದೀಪಾವಳಿ ಹಬ್ಬದ ಮುನ್ನ ಸುಮಾರು 5 ಎಕರೆ ಮೆಕ್ಕೆಜೋಳವನ್ನು ಕೊಯ್ಲು ಮಾಡಿ ಅಲ್ಲಲ್ಲಿ ರಾಶಿಯಾಗಿ ಹೊಲದಲ್ಲಿಯೇ ದುಂಡು ಹಾಕಲಾಗಿತ್ತು. ಹಬ್ಬ ಇದುದ್ದರಿಂದ 7 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಕೊಯ್ಲು ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರು. ಆದರೆ, ಬುಧವಾರ ಕೂಲಿ ಕಾರ್ಮಿಕರನ್ನು ಜೋಡಿಸಿಕೊಂಡು ಗುರುವಾರ ಹೊಲಕ್ಕೆ ಹೋಗುವ ಮೊದಲೇ ಹೊಲಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ.
ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಹರಪನಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.
'ಮಳೆ ಕೊರತೆಯ ನಡುವೆಯೂ ಅಳಿದುಳಿದ ಮೆಕ್ಕೆಜೋಳವನ್ನು ಹೆಚ್ಚಿನ ಕೂಲಿ ನೀಡಿ, ಕೊಯ್ಲು ಮಾಡಿಸಿ ರಾಶಿ ಹಾಕಿಸಲಾಗಿತ್ತು. ಮಳೆಯಿಂದ ಸಾವಿರಾರು ರೂಪಾಯಿ ನಷ್ಟದ ಜೊತೆಗೆ ಕೂಲಿ ಹಣವೂ ಹೋಗಿದೆ. ಪರಿಹಾರ ನೀಡಬೇಕು‘ ಎಂದು ರೈತ ಎನ್.ಟಿ ಮರುಳಸಿದ್ದಪ್ಪ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.