ಬಳ್ಳಾರಿ: ಕಳಪೆ ಊಟದ ವಿರುದ್ಧ ದನಿ ಎತ್ತಿದ್ದಕ್ಕಾಗಿ ಹಾಸ್ಟೆಲ್ನಿಂದ ಹೊರ ಹಾಕಲಾಗಿದ್ದ ಇಲ್ಲಿನ ಕೌಲ್ ಬಜಾರ್ ಪ್ರದೇಶದ ಪರಿಶಿಷ್ಟ ಪಂಗಡದ ಹಾಸ್ಟೆಲ್ ವಿದ್ಯಾರ್ಥಿಗಳು ಶುಕ್ರವಾರ ಹಾಸ್ಟೆಲ್ಗೆ ಮರಳಿದರು.
ಹಾಸ್ಟೆಲ್ನ ಕೆಲವು ವಿದ್ಯಾರ್ಥಿಗಳು ಬೆಳಿಗ್ಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರನ್ನು ಭೇಟಿ ಮಾಡಿದ್ದರು. ಅವರು ಮಕ್ಕಳಿಗೆ ಬುದ್ಧಿಮಾತು ಹೇಳಿದರು. ‘ಮಾಲಪಾಟಿ ನಮ್ಮ ಮಾತುಗಳನ್ನು ಸಮಾಧಾನದಿಂದ ಕೇಳಿಸಿಕೊಂಡರು’ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದರು.
‘ಕಳಪೆ ಊಟ ಸೇರಿದಂತೆ ಏನೇ ಹಾಸ್ಟೆಲ್ ಸಮಸ್ಯೆಗಳಿದ್ದರೂ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಇಲ್ಲವೆ ಜಿಲ್ಲಾ ಅಧಿಕಾರಿಗಳನ್ನು ಭೇಟಿಯಾಗಿ. ಸಮಸ್ಯೆ ಬಗೆಹರಿಯದಿದ್ದರೆ ಕಚೇರಿ ವೇಳೆಯಲ್ಲಿ ನನ್ನ ಬಳಿಗೆ ಬನ್ನಿ. ರಾತ್ರಿ ನಿಮಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ? ನಿಮ್ಮ ತಾಯಿ–ತಂದೆಗೆ ಆಗುವ ನಷ್ಟ ತುಂಬಲು ಸಾಧ್ಯವೇ? ಎಂಬ ಕಿವಿಮಾತು ಹೇಳಿದರು’ ಎಂದೂ ವಿದ್ಯಾರ್ಥಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಅವರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನಾ ಅವರನ್ನು ಕರೆಸಿಕೊಂಡು ಚರ್ಚಿಸಿದರು. ವಿದ್ಯಾರ್ಥಿಗಳು ಆ ನಂತರ ಹಾಸ್ಟೆಲ್ಗೆ ಮರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.