ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯ ಸದಸ್ಯ ಸೀತಾರಾಮ್ ಅವರ ಮೇಲೆ ಖಾರದಪುಡಿ ಎರಚಿ ಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ರಾತ್ರಿ ಅಂದ್ರಾಳಿನ ಅವರ ಮನೆ ಬಳಿ ನಡೆದಿದೆ.
ಆಂಧ್ರ ಪ್ರದೇಶದ ತಾಡಪತ್ರಿ ಮೂಲದ 8 ಮಂದಿ ರಾತ್ರಿ 8ರ ಸುಮಾರಿಗೆ ಸೀತಾರಾಮ್ ಅವರ ಮನೆಯ ಮುಂದೆಯೇ ಮಚ್ಚುಗಳಿಂದ ಹತ್ಯೆ ಮಾಡಲು ಮುಂದಾಗಿದ್ದರು.
ಕೂಡಲೆ ಜಾಗೃತರಾದ ಸೀತಾರಾಮ್ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡರು. ಆರೋಪಿಗಳ ಪೈಕಿ ಒಬ್ಬನನ್ನು ಸ್ಥಳೀಯರು ಹಿಡಿದು ವಶಕ್ಕೆ ಒಪ್ಪಿಸಿದರು. ಕೃತ್ಯಕ್ಕೆ ಬಳಕೆಯಾದ ಲಾಂಗ್, ಮಚ್ಚುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಯತ್ನ ನಡೆಸಿದ ಗುಂಪಿನ ಸದಸ್ಯ ಪೊಲೀಸರ ವಶದಲ್ಲಿ.
ಈ ಹಿಂದೆಯೂ ಸೀತಾರಾಮ್ ಮೇಲೆ ಮನೆ ಹತ್ತಿರವೇ ಬಾಂಬ್ ದಾಳಿ ನಡೆದಿತ್ತು. ಆಗಲೂ ಪ್ರಾಣಾಪಾಯದಿಂದ ಪಾರಾಗಿದ್ದರು. ಸೀತಾರಾಮ್ ಮಾಜಿ ರೌಡಿ ಶೀಟರ್ ಆಗಿದ್ದು, ಕ್ರಿಮಿನಲ್ ಪ್ರಕರಣಗಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಹತ್ಯೆ ಯತ್ನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.