ADVERTISEMENT

‘ಗಣಿ ಮಾಲೀಕರ ರಾಜಕಾರಣ: ರೋಸಿಹೋದ ಜನ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 9:21 IST
Last Updated 29 ಜನವರಿ 2018, 9:21 IST
ಕಾರ್ತಿಕೇಯ ಘೋರ್ಪಡೆ
ಕಾರ್ತಿಕೇಯ ಘೋರ್ಪಡೆ   

ಸಂಡೂರು: ‘ಜಿಲ್ಲೆಯಲ್ಲಿ ಗಣಿ ಮಾಲೀಕರ ರಾಜಕಾರಣದಿಂದ ರೋಸಿಹೋಗಿರುವ ಜನರು ಬದಲಾವಣೆ ಬಯಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮಾಜಿ
ಗಣಿ ಮಾಲೀಕರನ್ನು ಮಾಜಿ ರಾಜಕಾರಣಿಗಳನ್ನಾಗಿ ಮಾಡಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಸಂಡೂರಿನ ಘೋರ್ಪಡೆ
ರಾಜವಂಶಸ್ಥರಾದ ಕಾರ್ತಿಕೇಯ ಘೋರ್ಪಡೆ ಅವರು ಅಭಿಪ್ರಾಯ ಪಟ್ಟರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘2004ರ ನಂತರ ಗಣಿ ಮಾಲೀಕರ ಕೈಯಲ್ಲಿ ರಾಜಕೀಯ ಅಧಿಕಾರ ಸಿಕ್ಕ ಮೇಲೆ ಇಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಗಣಿಗಾರಿಕೆಯಿಂದ ಜಿಲ್ಲೆಯಲ್ಲಿ ಹಣದ ಹೊಳೆ ಹರಿದಿತ್ತು. ಆ ಹಣದಿಂದ ಇಲ್ಲಿಯ ಜನರಿಗೆ ಒಳ್ಳೆಯದಾಗಬೇಕಿತ್ತು. ಆದರೆ ಅದರಿಂದ ಸಾಮಾನ್ಯ ಜನತೆಗೆ ಏನೂ ಉಪಯೋಗವಾಗಲಿಲ್ಲ’ ಎಂದು ವಿಷಾದಿಸಿದರು.

‘ಸದ್ಯಕ್ಕೆ ಜನರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲದಂತಾಗಿದೆ. ಇಲ್ಲಿನ ಜನತೆಯ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಹಿಂದೆ ಇದ್ದಂತೆ ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿ, ಅಭಿವೃದ್ಧಿ ಮತ್ತೆ ಬೇಕಿದೆ. ಸ್ಥಳಿಯರಿಗೆ ಅವಕಾಶ ದೊರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಯುವ ಜನತೆ ಹಾಗೂ ಹಿರಿಯರು ರಾಜಕೀಯ ಬದಲಾವಣೆ ಬಯಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಜಿಲ್ಲೆಯಲ್ಲಿ ಗಣಿ ಮಾಲೀಕರ ರಾಜಕೀಯ ಮುಕ್ತಾಯವಾಗಬೇಕಿದೆ. ಬಡ ಜನತೆಗೂ ಅಧಿಕಾರ ದೊರಕುವಂತಾಗಬೇಕು. ಗಣಿ ಹಣದಿಂದ ಹದಗೆಟ್ಟಿರುವ ರಾಜಕೀಯವನ್ನು ಫಿನಾಯಿಲ್‌ ಹಾಕಿ ತೊಳೆಯಬೇಕಿದೆ. ಆಗ ಮಾತ್ರ ಜಿಲ್ಲೆಗೆ ಒಳ್ಳೆಯದಾಗಲಿದೆ. ಇದಕ್ಕೆ ಮುಂಬರುವ ಚುನಾವಣೆ ಉತ್ತಮ ಅವಕಾಶ
ವನ್ನು ಒದಗಿಸಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.