ADVERTISEMENT

ಬಿಜೆಪಿ ಪಕ್ಷದಲ್ಲಿ ಗಂಡಸರಿಲ್ಲವೆ?

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:52 IST
Last Updated 8 ಫೆಬ್ರುವರಿ 2018, 8:52 IST
ದೇವೇಂದ್ರಪ್ಪ
ದೇವೇಂದ್ರಪ್ಪ   

ಹಗರಿಬೊಮ್ಮನಹಳ್ಳಿ: ಚನ್ನಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಪಿ.ಯೋಗೀಶ್ವರ್‌ ಅವರನ್ನು ಬಿಜೆಪಿಗೆ ಸೇರಿಸಿಕೊಂಡಾಗ ಆ ಪಕ್ಷದಲ್ಲಿ ಗಂಡಸರು ಇರಲಿಲ್ಲವೆ? ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ದೇವೇಂದ್ರಪ್ಪ ಪ್ರಶ್ನಿಸುವ ಮೂಲಕ ಸಂಸದ ಬಿ.ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಶ್ರೀರಾಮುಲು ಅವರು ಇತ್ತೀಚೆಗೆ ಹೊಸಪೇಟೆ ಶಾಸಕ ಆನಂದ್‌ಸಿಂಗ್ ಕಾಂಗ್ರೆಸ್ ಪಕ್ಷ ಸೇರಿದಾಗ ಕಾಂಗ್ರೆಸ್ ಪಕ್ಷದಲ್ಲಿ ಗಂಡಸರು ಇಲ್ಲ. ಹಾಗಾಗಿ ಬಿಜೆಪಿ ಪಕ್ಷದ ಗಂಡಸರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು.

ಶ್ರೀರಾಮುಲು ಕೂಡಲೇ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು. ವಿಧಾನಸಭೆ ಚುನಾವಣೆ ಬಳಿಕ ಅವರು ಪುನಃ ಬಿಎಸ್‌ಆರ್‌ ಪಕ್ಷ ಸ್ಥಾಪಿಸುವುದು ಖಚಿತ. ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದಡಿ ಹೈಕಮಾಂಡ್ ನಿರ್ದೇಶನದಂತೆ ಟಿಕೆಟ್‌ ನೀಡಲಾಗುವುದು ಎಂದರು.

ADVERTISEMENT

ಫೆ.10ರಂದು ಹೊಸಪೇಟೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ವಿಧಾನಸಭಾ ಕ್ಷೇತ್ರದ 230 ಬೂತ್‌ಗಳಿಗೆ 500 ಬಸ್‌ ವ್ಯವಸ್ಥೆ ಮಾಡಲಾಗಿದೆ. ಫೆ.8ರಂದು ಪಟ್ಟಣದಿಂದ ಚಿಲಗೋಡುವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬೈಕ್‌ ರ‍್ಯಾಲಿ ನಡೆಸಿ ಸಮಾವೇಶಕ್ಕೆ ಬರುವಂತೆ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್‌.ಸೋಮಲಿಂಗಪ್ಪ, ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಹೆಗ್ಡಾಳ್ ರಾಮಣ್ಣ, ಸೊನ್ನದ ಮಹೇಶ್, ಎಚ್‌. ಸತ್ಯನಾರಾಯಣ, ಸಿ. ಬಸವರಾಜ, ಹಿಟ್ನಾಳ್ ಇಸ್ಮಾಯಿಲ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.