ADVERTISEMENT

ಜಿಟಿಜಿಟಿ ಮಳೆಯಲ್ಲೇ ಪೃಥ್ವಿರಾಜ್‌ ಸಿಂಗ್‌ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 14:56 IST
Last Updated 18 ಜುಲೈ 2021, 14:56 IST
ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಪೃಥ್ವಿರಾಜ್‌ ಸಿಂಗ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಇದ್ದಾರೆ
ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಪೃಥ್ವಿರಾಜ್‌ ಸಿಂಗ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಇದ್ದಾರೆ   

ಹೊಸಪೇಟೆ(ವಿಜಯನಗರ): ಮಡುಗಟ್ಟಿದ ದುಃಖ, ಅಶ್ರುತರ್ಪಣದ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ತಂದೆ ಪೃಥ್ವಿರಾಜ್‌ ಸಿಂಗ್‌ (84) ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ನಗರದ ರಾಣಿಪೇಟೆಯಲ್ಲಿ ನಡೆಯಿತು.

ಜಿಟಿಜಿಟಿ ಮಳೆಯ ನಡುವೆಯೇ ರಜಪೂತ ಸಮಾಜದ ವಿಧಿ ವಿಧಾನದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಧ್ಯಾಹ್ನ ಪೃಥ್ವಿರಾಜ್‌ ಸಿಂಗ್‌ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ ವಿವಿಧ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರು ಆನಂದ್‌ ಸಿಂಗ್‌ ಅವರ ಮನೆಗೆ ದೌಡಾಯಿಸಿ, ಅಂತಿಮ ದರ್ಶನ ಪಡೆದರು. ಹೊತ್ತು ಕಳೆದಂತೆ ಜನರ ಸಂಖ್ಯೆ ಹೆಚ್ಚಾಯಿತು.

ಅಂತ್ಯಸಂಸ್ಕಾರದ ಕೊನೆಯವರೆಗೂ ಆನಂದ್‌ ಸಿಂಗ್‌ ಅವರು ತಂದೆಯ ಪಾರ್ಥಿವ ಶರೀರದ ಬಳಿಯೇ ನಿಂತಿದ್ದರು. ಸಿಂಗ್ ಪತ್ನಿ ಲಕ್ಷ್ಮಿ ಸಿಂಗ್‌, ಮಗ ಸಿದ್ದಾರ್ಥ, ಸಂಬಂಧಿಕರಾದ ಧರ್ಮೇಂದ್ರ ಸಿಂಗ್‌, ಸಂದೀಪ್‌ ಸಿಂಗ್‌ ಇದ್ದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಈ. ತುಕಾರಾಂ, ಜೆ.ಎನ್‌. ಗಣೇಶ್‌, ಪಿ.ಟಿ. ಪರಮೇಶ್ವರ ನಾಯ್ಕ, ಬಿಜೆಪಿ ಮುಖಂಡ ಎಚ್‌.ಆರ್‌. ಗವಿಯಪ್ಪ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಕಾಡಾ ಅಧ್ಯಕ್ಷ ಎಚ್‌.ಎಂ. ತಿಪ್ಪೇರುದ್ರಸ್ವಾಮಿ, ವಿಜಯನಗರ ರಾಜವಂಶಸ್ಥ ಕೃಷ್ಣದೇವರಾಯ, ಡಿವೈಎಸ್ಪಿ ವಿ. ರಘುಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಎಚ್‌.ಎಲ್‌. ಜನಾರ್ದನ ಸೇರಿದಂತೆ ಹಲವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಆನಂದ್‌ ಸಿಂಗ್‌ ಅವರಿಗೆ ಸಾಂತ್ವನ ಹೇಳಿದರು.

ನಟ ರಾಜ್‌ಕುಮಾರ್‌ ಅವರ ಕಟ್ಟಾ ಅಭಿಮಾನಿಯಾಗಿದ್ದ ಪೃಥ್ವಿರಾಜ್‌ ಸಿಂಗ್‌ ಅವರು ಅವರಂತೆಯೇ ಅವರ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.