ಹೊಸಪೇಟೆ: ‘ಹೋರಾಟಗಾರರು ಹೋರಾಟ ನಡೆಸುವುದಕ್ಕೆ ಸ್ವತಂತ್ರರು. ಆದರೆ, ಬೇಕಾಬಿಟ್ಟಿ ಭಾಷೆ ಬಳಸಬಾರದು. ಈ ಹಿಂದೆ ಮಂಗಳಮುಖಿಯರನ್ನು ಕರೆಸಿ, ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದ್ದರು. ಅದರ ಬಗ್ಗೆ ನನಗೆ ನೋವಿಲ್ಲ. ಮಂಗಳಮುಖಿಯರು ಬೈದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವವನು’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ತಳವಾರಕೇರಿಯಲ್ಲಿ ಮಂಗಳವಾರ ರಾತ್ರಿ ಕೇರಿಯ ದೈವಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಆನಂದ್ ಸಿಂಗ್ ನೀನು ಎಲ್ಲಿದ್ದೀಯಾ ಎಂದು ಚಪ್ಪಾಳೆ ತಟ್ಟಿ ಕರೆದರೆ ನಾನೇ ಹೋಗುತ್ತಿದ್ದೆ. ಚಿಕ್ಕವರಿದ್ದಾಗ ಮಂಗಳಮುಖಿಯರಿಗೆ ನಾವು ಚುಡಾಯಿಸ್ತಾ ಇದ್ದೇವೆ’ ಎಂದು ನೆನಪು ಮಾಡಿಕೊಂಡರು.
‘ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ನನ್ನದು ಅಳಿಲು ಸೇವೆ. ಹೋರಾಟಗಾರರಿಗೆ ಅದರ ಗೌರವ ಸಲ್ಲಬೇಕು. ಪಂಪಾ ವಿರೂಪಾಕ್ಷನ ಆಶೀರ್ವಾದದಿಂದ ಅದು ಸಾಧ್ಯವಾಗಿದೆ. ಜಿಲ್ಲೆ ವಿಭಜನೆ ನಂತರ ಬಳ್ಳಾರಿಗೆ ತುಂಗಭದ್ರಾ ನೀರಿನ ಹಂಚಿಕೆ ಕಡಿಮೆಯಾಗುತ್ತದೆ. 373(ಜೆ) ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಐಎಸ್ಆರ್ ಕಾರ್ಖಾನೆ ಆರಂಭಿಸುವ ಕುರಿತು ಬರುವ ದಿನಗಳಲ್ಲಿ ಮಾತನಾಡುವೆ’ ಎಂದರು.
ಕೇರಿಯ ಮುಖಂಡರಾದ ಬೆಳಗೊಡ ರುದ್ರಪ್ಪ, ಕಂಪ್ಲಿ ಕಣಿಮಪ್ಪ, ಗುಜ್ಜಲ್ ಕಣಿಮಪ್ಪ, ನಿಸಾನಿ ಕಣಿಮಪ್ಪ, ಶಿವಕುಮಾರ್, ಟಿ. ಅಂಬಣ್ಣ, ಎಂ. ಲಕ್ಷ್ಮಣ, ಪೂಜಾರಿ ದುರುಗಪ್ಪ, ಕಟಗಿ ಜಂಬಯ್ಯ, ಜಿ. ಗಣೇಶ ತಳವಾರ, ದುರುಗೇಶ, ಟಿ. ಮಹೇಶ, ಜಿ. ಹುಲುಗಪ್ಪ, ಬೆಳಗೊಡ ಅಂಬಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.