ಬಳ್ಳಾರಿ: ಗುತ್ತಿಗೆದಾರರೊಬ್ಬರ ಬಿಲ್ ಬಾಕಿ ಉಳಿಸಿಕೊಂಡಿದ್ದ ಪ್ರಕರಣದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯ ಪೀಠೋಪಕರಣ ವಶಕ್ಕೆ ಪಡೆಯಲು ವಾಣಿಜ್ಯ ನ್ಯಾಯಾಲಯದ ಅಧಿಕಾರಿಗಳು ಶುಕ್ರವಾರ ಮುಂದಾದರು.
ಪಾಲಿಕೆ ಮೇಯರ್ ಮತ್ತು ಅಧಿಕಾರಿಗಳು, ಬಿಲ್ ಪಾವತಿ ಮಾಡಲು ಸಮಯವಕಾಶ ನೀಡುವಂತೆ ಗುತ್ತಿಗೆದಾರರು ಮತ್ತು ಕೋರ್ಟ್ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು. ಇದಕ್ಕೆ ಗುತ್ತಿಗೆದಾರರು ಒಪ್ಪಿದ್ದು, ಪೀಠೋಪಕರಣ ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.
2010ರಲ್ಲಿ ಗುತ್ತಿಗೆದಾರ ಶ್ರೀನಿವಾಸರಾಜು ಪಾಲಿಕೆಯಲ್ಲಿ ₹4.85 ಕೋಟಿ ಮೊತ್ತದ ಕಾಮಗಾರಿ ನಡೆಸಿದ್ದರು. ನಗರದ ಹೊರವಲಯದ ವೇಣಿವೀರಾಪುರ ಬಳಿಯ ಡಂಪಿಂಗ್ ಯಾರ್ಡ್ಗೆ 2.85 ಕಿ.ಮೀ. ಉದ್ದದ ರಸ್ತೆ ನಿರ್ಮಿಸುವ ಕಾಮಗಾರಿಯಲ್ಲಿ ಪಾಲಿಕೆಯು ಗುತ್ತಿಗೆದಾರರಿಗೆ ₹3.50 ಕೋಟಿ ಪಾವತಿ ಮಾಡಿತ್ತು. ₹1.35 ಕೋಟಿ ಬಾಕಿ ಉಳಿಸಿಕೊಂಡಿತ್ತು.
ಬಾಕಿ ಹಣಕ್ಕಾಗಿ 2011ರಿಂದ ಪಾಲಿಕೆ ಮತ್ತು ಗುತ್ತಿಗೆದಾರರ ನಡುವೆ ನ್ಯಾಯಾಂಗ ಹೋರಾಟ ನಡೆದಿತ್ತು. ನ್ಯಾಯಾಲಯದ ಸೂಚನೆಯಂತೆ ಪಾಲಿಕೆ ಸ್ವಲ್ಪ ಹಣ ಪಾವತಿ ಮಾಡಿ, ₹90.44 ಲಕ್ಷ ಬಾಕಿ ಉಳಿಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ವಾಣಿಜ್ಯ ನ್ಯಾಯಾಲಯವು ಪಾಲಿಕೆ ಆಯುಕ್ತರ ಕಚೇರಿ ಪೀಠೋಪಕರಣ ವಶಕ್ಕೆ ಪಡೆಯುವಂತೆ ಇತ್ತೀಚೆಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಅಧಿಕಾರಿಗಳು ಶುಕ್ರವಾರ ಪಾಲಿಕೆ ಕಚೇರಿಗೆ ಬಂದಿದ್ದರಾದರೂ, ಆಯುಕ್ತರು ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.