ಬಳ್ಳಾರಿ ಮಾರುಕಟ್ಟೆ (ಪ್ರಾತಿನಿಧಿಕ ಚಿತ್ರ)
ಬಳ್ಳಾರಿ: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸೋಮವಾರ ಹಮಾಲರು ಮತ್ತು ದಲ್ಲಾಳಿಗಳ ನಡುವೆ ಜಗಳ ನಡೆದಿದ್ದು, ದಿನದ ಮಟ್ಟಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು.
ಎಪಿಎಂಸಿಗೆ ಸೋಮವಾರ ಶೇಂಗಾ, ಜೋಳ ಹೆಚ್ಚಿನ ಆವಕವಾಗಿದೆ. ಹೀಗಾಗಿ ಉತ್ಪನ್ನಗಳನ್ನು ರಾಶಿ ಹಾಕುವ ವಿಚಾರಕ್ಕೆ ಮೊದಲಿಗೆ ಎರಡು ಅಂಗಡಿಗಳ ಹಮಾಲರ ನಡುವೆ ಜಗಳ ನಡೆದಿದೆ. ಈ ಜಗಳದಲ್ಲಿ ದಲ್ಲಾಳಿಗಳು ಮಧ್ಯ ಪ್ರವೇಶ ಮಾಡಿದ್ದರು. ಬಳಿಕ ಇದು ಹಮಾಲರು ಮತ್ತು ದಲ್ಲಾಳಿಗಳ ಜಗಳವಾಗಿ ಪರಿವರ್ತನೆಯಾಯಿತು ಎನ್ನಲಾಗಿದೆ.
ಇಬ್ಬರ ನಡುವಿನ ಜಗಳದ ಪರಿಣಾಮವಾಗಿ ಇಡೀ ದಿನ ವ್ಯಾಪಾರ ಸ್ಥಗಿತಗೊಂಡಿತು. ಸಂಜೆ ಹೊತ್ತಿಗೆ ಮುಖಂಡರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದು ಟೆಂಡರ್ ಆರಂಭವಾಯಿತು. ಆದರೆ ತೂಕ ಲೆಕ್ಕ ಹಾಕುವ ಕಾರ್ಯವನ್ನು ಮಾರನೇ ದಿನಕ್ಕೆ ಮುಂದೂಡಲಾಗಿದೆ.
ಮಂಗಳವಾರ ಬೆಳಿಗ್ಗೆ ಐದರಿಂದಲೇ ತೂಕ ಲೆಕ್ಕಹಾಕುವ ಕಾರ್ಯ ಆರಂಭವಾಗಲಿದ್ದು, ವ್ಯಾಪಾರ ನಡೆಯಲಿದೆ ಎಂದು ದಲ್ಲಾಳಿಗಳ ಸಂಘದ ಮುಖಂಡ ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರೈತರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.