ಕೂಡ್ಲಿಗಿ: ಖಾಸಗಿ ಬಸ್ಸೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಎಂಟು ಜನ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ತಾಲ್ಲೂಕಿನ ಬಿಷ್ಣಹಳ್ಳಿ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮೃತರು ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಸುರೇಶ ಜನಾದ್ರಿ (45), ಕುಷ್ಟಗಿ ತಾಲ್ಲೂಕಿನ ನಿರಲೂಟಿ ಗ್ರಾಮದ ಮನೋಜ್ ಬಂಡಿ (28) ಎಂದು ಗುರುತಿಸಲಾಗಿದೆ.
ಮುದಗಲ್ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕ ಬಿಷ್ಣಹಳ್ಳಿ ಕ್ರಾಸ್ ಬಳಿ ಬಂದಾಗ ಲಾರಿಯನ್ನು ಹಿಂದಿಕ್ಕಲು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಮತ್ತೊಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬಸ್ಸಿನಲ್ಲಿದ್ದ ಸುರೇಶ ಜನಾದ್ರಿ ಹಾಗೂ ಮನೋಜ್ ಬಂಡಿ ಮೃತಪಟ್ಟಿದ್ದು, ಸುನಿಲ್, ಬಾಬುಜಾನ್, ವಿಶ್ವೇಶ, ಹನುಮನಗೌಡ, ಮಂಜುನಾಥ, ಆರುಣ್, ಸೈಯಾದ್, ಹೆಸರು ತಿಳಿಯದ ಮತ್ತೊಬ್ಬ ಪುರುಷ ಗಾಯಗೊಂಡಿದ್ದು, ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗೆ ತೆರಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಾಹ್ನವಿ ಎಸ್., ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಕೊಟ್ಟೂರು ಸಿಪಿಐ ದುರುಗಪ್ಪ, ಕಾನಹೊಸಹಳ್ಳಿ ಪಿಎಸೈ ಸಿದ್ದರಾಮ ಬಿದರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಸ್ ಚಾಲಕ ವಿರುದ್ದ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.