ಹೊಸಪೇಟೆ: ‘ನನ್ನ ವಿರುದ್ಧ ನಿರಾಧಾರ ಸುದ್ದಿಗಳನ್ನು ಬಿತ್ತರಿಸಿದರೆ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಎಲ್.ಬಿ.ಪಿ. ಭೀಮಾ ನಾಯ್ಕ ಎಚ್ಚರಿಕೆ ನೀಡಿದರು.
ಗುರುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲವು ಮಾಧ್ಯಮಗಳು ಅನಗತ್ಯವಾಗಿ ರಮೇಶ್ ಜಾರಕಿಹೊಳಿ ಅವರೊಂದಿಗೆ ನನ್ನ ಹೆಸರು ತಳುಕು ಹಾಕುತ್ತಿವೆ. ನಾನು ಕಾಂಗ್ರೆಸ್ ತೊರೆಯುತ್ತೇನೆ ಎಂದು ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳ ಬಳಿ ಏನಾದರೂ ಸಾಕ್ಷಿಯಿದೆಯೇ.ನಾನು ಕಾಂಗ್ರೆಸ್ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ’ ಎಂದು ಗರಂ ಆದರು.
‘ನನಗೆ ಕೆಲವೊಂದು ವಿಚಾರಗಳಲ್ಲಿ ಅಸಮಾಧಾನ ಇರುವುದು ನಿಜ. ಹಾಗಂತ ಪಕ್ಷ ಬಿಡುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಎಲ್ಲ ಬಗೆಹರಿಸಿಕೊಳ್ಳುವೆ. ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಘಟನೆಯಲ್ಲಿ ನನ್ನ ಹೆಸರು ಎಳೆ ತಂದಿರುವ ವಿಚಾರ ಗಮನಕ್ಕೆ ಬಂದಿಲ್ಲ. ಆ ಘಟನೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.