ಹರಪನಹಳ್ಳಿ: ಅರಸೀಕೆರೆ ಹೋಬಳಿ ಗುಳೇದಹಟ್ಟಿ ತಾಂಡಾದ ಬುಡಕಟ್ಟು ಜನಾಂಗದವರಿಗೆ ಸೇರಿದ್ದ ಭೂಮಿ ಕಸಿದುಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಭೂಮಿ ಮರು ಕೊಡಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್ (ಮಾರ್ಕ್ಸ್ ವಾದಿ –ಲೆನಿನ್ ವಾದಿ) ಲಿಬರೇಷನ್ ಕಾರ್ಯಕರ್ತರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಪ್ರವಾಸಿಮಂದಿರ ವೃತ್ತದಿಂದ ಮೆರವಣಿಗೆ ಹೊರಟು ತಾಲ್ಲೂಕು ಆಡಳಿತಸೌಧದ ಆವರಣದ ಮುಂಭಾಗ ಹಾಕಿದ್ದ ಟೆಂಟ್ನಲ್ಲಿ ಪ್ರತಿಭಟನೆ ಮುಂದುವರಿಸಿದರು.
ಗುಳೇದಹಟ್ಟಿ ಸಂತೋಷ ಮಾತನಾಡಿ, ‘ಕಂಚಿಕೇರಿ ಸರ್ವೆ ನಂಬರ್ ‘3ಎ’ರ ಭೂಮಿಯನ್ನು 1964ರಲ್ಲಿ ತಾಂಡಾದ ಲಂಬಾಣಿ ಕುಟುಂಬಗಳಿಗೆ ನೀಡಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ರೈತರು ಉಳುಮೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕೆಲ ರಾಜಕಾರಣಿಗಳ ಒತ್ತಡಕ್ಕೆ ಮಣಿದು, 192 ಎಕರೆ ಭೂಮಿಯನ್ನು ಒಕ್ಕಲೆಬ್ಬಿಸಿದ್ದಾರೆ. ಕೂಡಲೇ ಒಕ್ಕಲೆಬ್ಬಿಸಿರುವ ಭೂಮಿಯನ್ನು ರೈತರಿಗೆ ವಾಪಸ್ಸು ಕೊಡಲು ಜಿಲ್ಲಾಧಿಕಾರಿ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು.
‘ನಮ್ಮ ಬಳಿ ಮಂಜೂರಾತಿ ಪತ್ರವಿದೆ, ಕೈ ಬರಹ ಪಹಣಿಗಳು, ಕಂದಾಯ ರಸೀದಿಗಳಿವೆ. ಇದ್ಯಾವುದಕ್ಕೂ ಅಧಿಕಾರಿಗಳು ಪರಿಗಣಿಸದೇ ನಮಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ದೂರಿದರು.
ಮುಖಂಡರಾದ ಸಂದೇರ ಪರಶುರಾಮ್, ಅಣ್ಣನಾಯ್ಕ, ಕೆ.ಮಂಜನಾಯ್ಕ, ಕುಬೇರನಾಯ್ಕ, ರಾಜನಾಯ್ಕ, ಮಲ್ಲೇಶ ನಾಯ್ಕ, ಬಿ.ಪಕ್ಕೀರಪ್ಪ, ತಿಮ್ಮಪ್ಪ, ನಾಗರಾಜ್, ಕುಮಾರನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.