ಹೊಸಪೇಟೆ: ಸರ್ಕಾರಿ ಅನುದಾನಿತ ಪದವಿ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಖಾಸಗಿ ಪದವಿಪೂರ್ವ ಕಾಲೇಜು ನಡೆಸುತ್ತಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿ.ವೈ.ಎಫ್.ಐ.) ಕಾರ್ಯಕರ್ತರು ಮಂಗಳವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
’ವಿಜಯನಗರ ಕಾಲೇಜು ಶಿಕ್ಷಣ ದಾಸೋಹ ಕೆಲಸ ಮರೆತು ಕೇವಲ ಲಾಭಕ್ಕಾಗಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಪದವಿ ಮತ್ತು ಪದವಿಪೂರ್ವ ಕಾಲೇಜಿಗೆ ಸರ್ಕಾರದಿಂದ ಅನುದಾನ ಬರುತ್ತಿದೆ. ಯು.ಜಿ.ಸಿ. ನಿಯಮಕ್ಕೆ ಒಳಪಟ್ಟಿದೆ. ಯುಜಿಸಿ ನಿಯಮದ ಪ್ರಕಾರ, ಪದವಿ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜು ನಡೆಸಬಾರದು. ಸರ್ಕಾರಿ, ಅನುದಾನಿತ ಪಿಯು ಕಾಲೇಜು ಇದ್ದರೆ ಹೊಸ ಪಿಯು ಕಾಲೇಜಿಗೆ ಅನುಮತಿ ನೀಡಬಾರದು. ಆದರೆ, ಇಲ್ಲಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ‘ ಎಂದು ಆರೋಪಿಸಿದ್ದಾರೆ.
’ವಿದ್ಯಾರ್ಥಿಗಳಿಂದ ಕಾಲೇಜಿನಲ್ಲಿ ನಿಯಮ ಬಾಹಿರವಾಗಿ ಅಧಿಕ ಶುಲ್ಕ ಪಡೆಯಲಾಗುತ್ತಿದೆ. ಪ್ರಾಧ್ಯಾಪಕರಿಗೆ ಯು.ಜಿ.ಸಿ. ನಿಯಮದಂತೆ ಸಂಬಳ ಕೊಡುತ್ತಿಲ್ಲ. ಅದಕ್ಕೆ ಕೂಡಲೇ ಕಡಿವಾಣ ಹಾಕಬೇಕು‘ ಎಂದು ಆಗ್ರಹಿಸಿದ್ದಾರೆ.
ಡಿ.ವೈ.ಎಫ್.ಐ. ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್, ತಾಲ್ಲೂಕು ಅಧ್ಯಕ್ಷ ಕಿನ್ನಾಳ್ ಹನುಮಂತ, ಮುಖಂಡರಾದ ಕಲ್ಯಾಣಯ್ಯ, ಇ. ಮಂಜುನಾಥ, ಬಂಡೆ ತಿರುಕಪ್ಪ, ಕೆ.ಎಂ. ಸಂತೋಷ್, ವಿಜಯಕುಮಾರ್, ಹನುಮ ನಾಯ್ಕ, ಸೂರ್ಯಕಿರಣ್, ರಾಜಚಂದ್ರಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.