ಬಳ್ಳಾರಿ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಸುಭಾಷ್ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಸೋಮವಾರ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
‘ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬೋಧಕರ ಹುದ್ದೆಗಳ ನೇಮಕಾತಿ ಸಲುವಾಗಿ ಸಂದರ್ಶನ ನಡೆಸಬಾರದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಅವರಿಂದ ಮೌಖಿಕ ಸೂಚನೆ ಇತ್ತು. ಆದಾಗ್ಯೂ ಸಂದರ್ಶನ ನಡೆಸಿದ್ದು ತನಿಖೆ ವೇಳೆ ಸಾಬೀತಾಗಿದ್ದರಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ರಮೇಶ್ ಕೊನರೆಡ್ಡಿ ತಿಳಿಸಿದರು. ಮಾರ್ಚ್ 12ರಿಂದ ಆರಂಭವಾದ ಸಂದರ್ಶನ ಪ್ರಕ್ರಿಯೆ, ಅಂದು ಸಂಜೆಯವರೆಗೂ ನಡೆದಿತ್ತು. ನಂತರ ಸ್ಥಗಿತಗೊಳಿಸಲಾಗಿತ್ತು.
‘ನೀತಿ ಸಂಹಿತೆ ಇದ್ದರೂ ಸಂದರ್ಶನ ಏಕೆ ನಡೆಸಿದ್ದೀರಿ? ಆ ಬಗ್ಗೆ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು?’ ಎಂದು ಕಾರಣ ಕೇಳಿ ನೀಡಿದ್ದ ನೋಟಿಸ್ಗೆ, ಸಂದರ್ಶನ ನಿಲ್ಲಿಸಿರುವುದಾಗಿ ಕುಲಪತಿ ಉತ್ತರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.