ADVERTISEMENT

ಪೋಷಕಾಂಶ ನೀಡಲು ತಜ್ಞರ ಸಲಹೆ

ಮೆಣಸಿನಕಾಯಿ ಫಸಲಿಗೆ ರೋಗಬಾಧೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 4:10 IST
Last Updated 16 ಸೆಪ್ಟೆಂಬರ್ 2021, 4:10 IST
ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರ ಗ್ರಾಮದ ಮೆಣಸಿನಕಾಯಿ ಹೊಲವೊಂದಕ್ಕೆ ಹಗರಿ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞ ಡಾ. ಆನಂದ್‌ ಕುಮಾರ್‌ (ಎಡದಿಂದ ಐದನೆಯವರು) ಭೇಟಿ ನೀಡಿ ಪರಿಶೀಲಿಸಿದರು
ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರ ಗ್ರಾಮದ ಮೆಣಸಿನಕಾಯಿ ಹೊಲವೊಂದಕ್ಕೆ ಹಗರಿ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞ ಡಾ. ಆನಂದ್‌ ಕುಮಾರ್‌ (ಎಡದಿಂದ ಐದನೆಯವರು) ಭೇಟಿ ನೀಡಿ ಪರಿಶೀಲಿಸಿದರು   

ಸಿರುಗುಪ್ಪ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಣಸಿನಕಾಯಿ ಫಸಲಿಗೆ ಹವಾಮಾನ ವೈಪರೀತ್ಯದಿಂದ ಕೀಟ ಮತ್ತು ರೋಗಗಳ ಬಾಧೆ ಹೆಚ್ಚಾಗಿ ಕಂಡು ಬಂದಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞ ಡಾ. ಆನಂದ್‌ ಕುಮಾರ್‌ ಹೇಳಿದರು.

ತಾಲ್ಲೂಕಿನ ಶಾನವಾಸಪುರ, ದಾಸಾಪುರ, ಕೊಂಚಗೇರಿ ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆದ ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು. ಬೆಳೆಗೆ ಎಲೆಮುದುಡು, ಕೆಳಮುದುಡು, ಹಳದಿ ನಂಜು ರೋಗ, ಥ್ರಿಪ್ಸ್ , ನುಸಿ ಮತ್ತು ಬಿಳಿ ನೊಣಗಳು ಹಾವಳಿ ಹೆಚ್ಚಾಗಿ ಕಂಡು ಬಂದಿದೆ. ಇವುಗಳಿಂದಾಗಿ ಗಿಡಗಳು ಸರಿಯಾಗಿ ಬೆಳೆಯದೇ ಕುಂಠಿತಗೊಂಡಿವೆ ಮತ್ತು ಕೆಲವು ಬಾಧಿತ ಗಿಡಗಳು ಬಂಜೆಯಾಗಿರುತ್ತವೆ ಎಂದು ತಿಳಿಸಿದರು.

ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಪೋಷಕಾಂಶಗಳ ಕೊರತೆ ನೀಗಿಸಲು ಲಘು ಪೋಷಕಾಂಶಗಳನ್ನು ಪ್ರತಿ 15 ದಿನಗಳಿಗೊಮ್ಮೆ ಸಿಂಪಡಿಸಲು ಸಲಹೆ ನೀಡಿದರು.

ADVERTISEMENT

ಹಳದಿ ಹಾಗೂ ನೀಲಿ ಅಂಟು ಬಲೆಗಳನ್ನು ಪ್ರತಿ ಎಕರೆಗೆ 10 ರಂತೆ ಹಾಕಬೇಕು, ಜಮೀನಿನ ಸುತ್ತ 3 ಸಾಲು ಜೋಳ ಅಥವಾ ಮೆಕ್ಕೆಜೋಳ ಬೆಳೆಯುವದರಿಂದ ಇವುಗಳನ್ನು ಹತೋಟಿಗೆ ತರಬಹುದಾಗಿದೆ ಎಂದು ರೋಗ ತಜ್ಞ ಡಾ.ಎಂ.ಆರ್.ಗೋವಿಂದಪ್ಪ ಸಲಹೆ ನೀಡಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ. ವಿಶ್ವನಾಥ, ಅಧಿಕಾರಿಗಳಾದ ಪಿ. ಮಲ್ಲಿಕಾರ್ಜುನ, ಪಿ. ಗೋಪಿನಾಯ್ಕ ಕರೂರು ಬೆಳೆಗಾರರೊಂದಿಗೆ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡರು. ರೈತರಾದ ಶಶಿಕಲಾ ಜಿ. , ಸಿ.ಎರ್ರೆಪ್ಪಗೌಡ , ಕೊಂಚಿಗೇರಿ ಬಳ್ಳಾರಿ ಸಣ್ಣ ಎರ್ರೆಪ್ಪ, ಮುದ್ದುಬಸಪ್ಪ, ವೀರೇಶಮುದ್ದುಬಸಪ್ಪ, ಬಳ್ಳಾರಿ ಗಾದಿಲಿಂಗಪ್ಪ, ಪಂಪನಗೌಡ ಮತ್ತು ಅಮರೇಗೌಡ , ಡಿ.ಎರ್ರೆಪ್ಪ ಗೌಡ ಮತ್ತು ವೀರೇಶಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.