
ಪ್ರಜಾವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಅರಣ್ಯಭೂಮಿ ಮತು ಸರ್ಕಾರಿ ಭೂಮಿ ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ವಿತರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಶಾಸಕ ಕೆ.ನೇಮರಾಜನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಮುಖಂಡ ಎಸ್.ಜಗನ್ನಾಥ ಮಾತನಾಡಿ, ಕಳೆದ ಮೂರು ತಲೆಮಾರುಗಳಿಂದ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅಕ್ರಮ ಸಕ್ರಮ ಅಡಿಯಲ್ಲಿ ಯಾವುದೇ ಅರ್ಜಿಯನ್ನು ತಿರಸ್ಕರಿಸದೇ ಒಕ್ಕಲೆಬ್ಬಿಸಬಾರದು, ನೋಟಿಸ್ ನೀಡುವುದನ್ನು ನಿಲ್ಲಿಸಬೇಕು ಎಂದರು.
ಅರಣ್ಯ ಹಕ್ಕು ಸಮಿತಿಯಲ್ಲಿ 7ದಿನಗಳ ಮುಂಚೆಯೇ ನೋಟಿಸ್ ಕೊಡದೇ ತರಾತುರಿಯಲ್ಲಿ ಸಮಿತಿಯನ್ನು ಮಾಡಿ ಕೆಲವು ರೈತರನ್ನು ಕೈಬಿಡಲಾಗಿದೆ. ಇದರಿಂದ ರೈತರಿಗೆ ವಂಚನೆಯಾಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದ ಸಭೆಯಲ್ಲಿ ರೈತರಿಗೆ ಸರಿಯಾದ ಕಾನೂನಿನ ಮಾಹಿತಿ ನೀಡದೆ ದಾಖಲೆಗಳನ್ನು ಸ್ವೀಕರಿಸದೇ, ಸಾಕ್ಷಿಗಳಿಂದ ವಿವರಣೆ ಪಡೆಯದೇ ಜಮೀನುಗಳಿಗೆ ತೆರಳಿ ಸಮೀಕ್ಷೆ ನಡೆಸದೆ ಏಕಾಏಕಿ ಸಭೆ ಮುಗಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಬದ್ಧ ಭೂ ಸುಧಾರಣೆ ಕಾಯ್ದೆ ಕಾನೂನು ಅಡಿಯಲ್ಲಿ ನ್ಯಾಯ ಒದಗಿಸಬೇಕು, ದಶಮಾಪುರ ಮತ್ತು ಹಲಗಾಪುರ ಪಂಚಾಯಿತಿಗಳಲ್ಲಿ ಮತ್ತೊಮ್ಮೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎಂ.ಆನಂದ್, ಗೋವಿಂದನಾಯ್ಕ, ಕೆ.ಮಂಜುನಾಥ, ಎಲ್.ಟೀಕ್ಯಾನಾಯ್ಕ, ಕೆ.ಮಹೇಶ್, ಬಿ.ಮೈಲಪ್ಪ, ದುರುಗಪ್ಪ, ಎಸ್.ದುರುಗಪ್ಪ, ಶಿವಪ್ಪ ಇದ್ದರು.