ಹೊಸಪೇಟೆ: ನೂತನ ಪಿಂಚಣಿ ಯೋಜನೆ ವಿರೋಧಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ರಕ್ತದಾನ ಮಾಡಿ, ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
‘ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ಎಂಬ ಬರಹವುಳ್ಳ ಗಾಂಧಿ ಟೋಪಿ ಧರಿಸಿ, ನೌಕರರ ಸಂಘದ ಎಲ್ಲ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಒಬ್ಬೊಬ್ಬರಾಗಿ ಸರತಿ ಸಾಲಿನಲ್ಲಿ ರಕ್ತದಾನ ಮಾಡಿದರು.
ಬಳಿಕ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಎಂ. ಗುರುಬಸವರಾಜ, ‘2004ರ ಜ.1ರಿಂದ ಕೇಂದ್ರ ಸರ್ಕಾರಿ ನೌಕರರು ಹಾಗೂ 2006 ಏ.1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರ ನಿಗದಿತ ಪಿಂಚಣಿ ರದ್ದುಪಡಿಸಿ ನೂತನ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಇದು ನೌಕರರ ವಿರೋಧಿ ಯೋಜನೆಯಾಗಿದೆ. ಸಂಧ್ಯಾಕಾಲದಲ್ಲಿ ಅವರನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ ಇದಾಗಿದೆ’ ಎಂದು ಆರೋಪಿಸಿದರು.
‘ಯೋಜನೆ ಜಾರಿಗೆ ಬಂದ ದಿನದಿಂದಲೂ ಸಂಘದಿಂದ ರಾಜ್ಯದಾದ್ಯಂತ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತ ಬರಲಾಗಿದೆ. ಆದರೆ, ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಈ ಸಲ ಸರ್ಕಾರದ ಕಣ್ಣು ತೆರೆಸಲು ರಾಜ್ಯದಾದ್ಯಂತ ರಕ್ತದಾನ ಮಾಡಲಾಗುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಹಳೆ ಪಿಂಚಣಿ ಯೋಜನೆ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಜಿ. ಶಿವಾನಂದಗೌಡ, ಉಪಾಧ್ಯಕ್ಷರಾದ ಮಂಜುನಾಥ, ಕೆ. ಸರಿತಾ, ಸಹ ಕಾರ್ಯದರ್ಶಿಗಳಾದ ಜಿ. ವಿಜಯಕುಮಾರ, ಪಾರ್ವತಿ, ಸಂಘಟನಾ ಕಾರ್ಯದರ್ಶಿ ಕೆ. ಬಸವನಗೌಡ, ಪದಾಧಿಕಾರಿಗಳಾದ ಮಾಲತೇಶ ದೊಡ್ಡಮನಿ, ವಿ.ಎಸ್. ಅಮರನಾಥ, ಎನ್.ಬಿ. ಮಧುಸೂದನ್, ಪಿ.ಜೆ. ನಿರಂಜನ್, ಸಿ. ಗುರುಬಸವರಾಜ, ಎಸ್.ವಿ. ಪ್ರಸನ್ನ, ಕೆ. ಪ್ರಕಾಶ, ಉಮೇಶ, ಶಿಲ್ಪಕಲಾ, ವೈ. ಯೋಗೇಶ್, ಎಂ.ಜೆ. ಕರಿಬಸಜ್ಜ, ಎಂ. ಭರಮಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.