ADVERTISEMENT

ಸಾಹಿತ್ಯ ಪರಿಷತ್‌ ಚುನಾವಣೆ| ಮಹಿಳೆಗೆ ಮೊದಲ ಅವಕಾಶ ಕೊಡಿ: ವಿನೋದಾ ಕರ್ಣಂ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 9:06 IST
Last Updated 2 ಏಪ್ರಿಲ್ 2021, 9:06 IST
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ವಿನೋದಾ ಕರ್ಣಂ ಅವರು ಹೊಸಪೇಟೆಯಲ್ಲಿ ಮತಯಾಚಿಸಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ವಿನೋದಾ ಕರ್ಣಂ ಅವರು ಹೊಸಪೇಟೆಯಲ್ಲಿ ಮತಯಾಚಿಸಿದರು   

ಹೊಸಪೇಟೆ (ವಿಜಯನಗರ): ಕನ್ನಡ ಸಾಹಿತ್ಯ ಪರಿಷತ್ತಿನ ಅವಿಭಜಿತ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ವಿನೋದಾ ಕರ್ಣಂ ಗುರುವಾರ ಸಂಜೆ ನಗರದಲ್ಲಿ ಮತಯಾಚಿಸಿದರು.

ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಪರಿಷತ್ತಿನ ಸದಸ್ಯರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು. ಲೇಖಕರಾದ ಎಸ್.ಶಿವಾನಂದ, ನಾಗರಾಜ ಪತಾರ್, ಮೃತ್ಯುಂಜಯ ರುಮಾಲೆ, ಡಾ. ಸುಲೋಚನಾ, ಸುಜಾತ ರೇವಣಸಿದ್ದಪ್ಪ, ದಯಾನಂದ ಕಿನ್ನಾಳ್, ನೂರ್ ಜಹಾನ್, ವೆಂಕಟೇಶ ಬಡಿಗೇರ್, ವೀರೇಶ್ ಬಡಿಗೇರ ಮಲ್ಲಾರಿ ದೀಕ್ಷಿತ್, ಕಮಲಾ ದೀಕ್ಷಿತ್‌ ಸೇರಿದಂತೆ ಇತರರನ್ನು ಭೇಟಿಯಾಗಿ ಬೆಂಬಲ ಯಾಚಿಸಿದರು.

‘25 ವರ್ಷ ಇತಿಹಾಸ ಹಾಗೂ ಕನ್ನಡ ವಿಷಯದ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಸ್ವರಚಿತ 13 ಪುಸ್ತಕಗಳನ್ನು ಬರೆದಿದ್ದೇನೆ. ಅನೇಕರ ಬೆಂಬಲದೊಂದಿಗೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿರುವ ಅನುಭವವಿದೆ. ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದುವರೆಗೆ ಜಿಲ್ಲೆಯಲ್ಲಿ ಯಾವ ಮಹಿಳೆಯೂ ಅಧ್ಯಕ್ಷ ಸ್ಥಾನ ಅಲಂಕರಿಸಿಲ್ಲ. ಆ ಕೊರತೆ ನೀಗಬೇಕು’ ಎಂದು ವಿನೋದಾ ಕರ್ಣಂ ಹೇಳಿದರು.

‘ಪರಿಷತ್ತಿನ ಎಲ್ಲ ಸದಸ್ಯರು ಜಾತಿ, ಮತ, ಪಂಥ, ಧರ್ಮ ಮೀರಿ ನನ್ನನ್ನು ಬೆಂಬಲಿಸುತ್ತಾರೆ ಎನ್ನುವ ಭರವಸೆ ಇದೆ. ಅನೇಕರು ಈಗಾಗಲೇ ನನಗೆ ಬೆಂಬಲ ಸೂಚಿಸಿದ್ದಾರೆ. ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದು ನನ್ನ ಉತ್ಸಾಹ ಇಮ್ಮಡಿಗೊಳಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.