ಹೊಸಪೇಟೆ: ನಗರದಲ್ಲಿ ಗುರುವಾರ ಬಿರುಸಿನ ಮಳೆಯಾಯಿತು.
ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡಿದ್ದ ಮಳೆ ಅರ್ಧಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು. ಕೆಲಕಾಲ ಬಿಡುವು ನೀಡಿದ ವರ್ಷಧಾರೆ ಮತ್ತೆ ಸಂಜೆ 6.30ರ ವರೆಗೆ ಬಿತ್ತು.
ಬಿರುಸಾಗಿ ಮಳೆಯಾದ ಕಾರಣ ನಗರದ ಬಸ್ ನಿಲ್ದಾಣ ರಸ್ತೆ, ಕಾಲೇಜು ರಸ್ತೆ, ಬಳ್ಳಾರಿ ರಸ್ತೆ, ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹಗಲು ಹೊತ್ತಿನಲ್ಲೇ ವಾಹನಗಳು ದೀಪ ಬೆಳಗಿಸಿಕೊಂಡು ಸಂಚರಿಸಿದವು. ಸಂಜೆ ಶಾಲಾ, ಕಾಲೇಜು ಹಾಗೂ ದೈನಂದಿನ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದವರು ಮಳೆಯಲ್ಲಿ ಸಿಲುಕಿಕೊಂಡರು. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿಯ ಕಟ್ಟಡಗಳ ಆಶ್ರಯ ಪಡೆದುಕೊಂಡು ನಿಂತಿದ್ದರು. ಮತ್ತೆ ಕೆಲವರು ಕೊಡೆಗಳನ್ನು ಹಿಡಿದುಕೊಂಡು ಮನೆಯತ್ತ ಹೆಜ್ಜೆ ಹಾಕಿದರು. ರೋಟರಿ ಹಾಗೂ ಸ್ಟೇಶನ್ ರಸ್ತೆಯಲ್ಲಿ ಜನಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಮಳೆಯಿಂದ ನಗರದ ಬಳ್ಳಾರಿ ರಸ್ತೆ, ರಾಣಿಪೇಟೆ, ಬಸವೇಶ್ವರ ಬಡಾವಣೆ, ಚಪ್ಪರದಹಳ್ಳಿ, ಅಮರಾವತಿ ಹಾಗೂ ಚಿತ್ತವಾಡ್ಗಿಯ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿತ್ತು.
ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಮರಿಯಮ್ಮನಹಳ್ಳಿ, ವ್ಯಾಸನಕೆರೆ, ಬಸವನದುರ್ಗ, ನಾಗೇನಹಳ್ಳಿ, ಹೊಸೂರು, ಇಪ್ಪಿತೇರಿ, ಬೈಲುವದ್ದಿಗೇರಿ, ಧರ್ಮಸಾಗರ, ಕಾಕುಬಾಳು, ಪಾಪಿನಾಯಕನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.