ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಗುರುವಾರ ರಾತ್ರಿ 7.30ರ ವೇಳೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿದಿದ್ದು, ಶುಕ್ರವಾರ ಸಂಜೆಯೂ ಅಲ್ಲಲ್ಲಿ ಮಳೆಯಾಗಿದೆ.
ತಾಲ್ಲೂಕಿನ ಕಕ್ಕುಪ್ಪಿ, ವಿರುಪಾಪುರ, ಅಮಲಾಪುರ, ಕಕ್ಕುಪ್ಪಿ ಸೇರಿದಂತೆ ಅನೇಕ ಕಡೆ ಹಳ್ಳಗಳು ಹರಿದಿವೆ. ಇದರಿಂದ ಕಟ್ಟೆಗಳಲ್ಲಿ, ತಗ್ಗುಗಳಲ್ಲಿ ನೀರು ಸಂಗ್ರಹವಾಗಿ ಜಾನುವಾರುಗಳ ನೀರಿನ ದಾಹ ತಣಿಸಲು ಸಹಕಾರಿಯಾಗಿದೆ.
ಇದೀಗ ಬಿದ್ದ ಹದ ಮಳೆಯಿಂದ ರೈತರ ಮೊಗದಲ್ಲಿ ಹರ್ಷ ಮೂಡಿದ್ದು, ಜೋಳ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇದರ ಜೊತೆಗೆ ಮಕ್ಕೆಜೋಳ, ಶೇಂಗಾ ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸಿಕೊಳ್ಳಲು ರೈತರು ಮುಂದಾಗಿದ್ದಾರೆ. ಈ ಹಿಂದೆ ಬಿದ್ದ ಅಲ್ಪಸ್ವಲ್ಪ ಮಳೆಗೆ ಕೆಲ ರೈತರು ಬಿತ್ತನೆ ಮಾಡಿದ್ದ ಜೋಳಕ್ಕೆ ಮಳೆ ಅನುಕೂಲವಾಗಿದೆ. ಕಡಿಮೆ ತೇವಾಂಶವಿರುವ ಪ್ರದೇಶದಲ್ಲಿ ರೈತರು ಇನ್ನು ಬಿತ್ತನೆ ಮಾಡಲು ಮುಂದಾಗಿಲ್ಲ.
ಮಳೆ ಪ್ರಮಾಣ: ಕೂಡ್ಲಿಗಿ-3.86 ಸೆಂ.ಮೀ, ಗುಡೇಕೋಟೆ-3.83 ಸೆಂ.ಮೀ, ಹೊಸಹಳ್ಳಿ 1.66 ಸೆಂ.ಮೀ, ಚಿಕ್ಕಜೊಗಿಹಳ್ಳಿ-1.52 ಸೆಂ.ಮೀ ಹಾಗೂ ಬಣವಿಕಲ್ಲು-1.93 ಸೆಂ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.