ADVERTISEMENT

ಹಂಪಿ-ಬೆಂಗಳೂರು ಪಾದಯಾತ್ರೆ : ಶಾಸಕ ರೆಡ್ಡಿ

ನಿಗದಿತ ದಿನದಂದು ಹಂಪಿ ಉತ್ಸವ ಆಚರಿಸಲಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 15:08 IST
Last Updated 6 ಜನವರಿ 2019, 15:08 IST

ಬಳ್ಳಾರಿ: ಐತಿಹಾಸಿಕ ಹಂಪಿ ಉತ್ಸವವನ್ನು ಜಿಲ್ಲಾಡಳಿತ ನಿಗದಿ ಮಾಡಿದ್ದ ದಿನಾಂಕದಂದೇ ಆಚರಿಸದಿದ್ದಲ್ಲಿ ಹಂಪಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗುವುದು ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

ನಗರದಲ್ಲಿ ಭಾನುವಾರ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಹಾಗೂ ಇಂಧನದ ಮೇಲಿನ ತೆರಿಗೆ ಕೈ ಬಿಡುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಣೆಯಲ್ಲಿ ಅನವಶ್ಯಕ ಮೀನಮೇಶ ಎಣಿಸುತ್ತಿದೆ. ಜಿಲ್ಲಾಡಳಿತ ನಿಗದಿಸಿದ್ದ ಜ.12, 13ರಂದು ಉತ್ಸವ ಆಚರಿಸದಿದ್ದರೆ, ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ಎಂದು ಹೇಳಿದರು.

ನಾವು ಭಿಕ್ಷೆ ಬೇಡಿ ಹಂಪಿ ಉತ್ಸವ ಆಚರಿಸಲು ಮುಂದಾಗಿದ್ದೆವು. ಆದರೆ, ರಾಜ್ಯ ಸರ್ಕಾರದಿಂದ ಉತ್ಸವ ಆಚರಿಸುತ್ತೇವೆ ಎಂದು ಹೇಳಿ ಇದೀಗಕಡೆಗಣಿಸುತ್ತಿದ್ದಾರೆ. ಇದು ಜಿಲ್ಲೆಯ ಕಲಾವಿದರಲ್ಲಿ ಅತೀವ ಬೇಸರ ಮೂಡಿಸಿದೆ ಎಂದರು.

ADVERTISEMENT

ಸಂಕ್ರಾಂತಿ ನಂತರ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆಯೇಎಂಬ ಪ್ರಶ್ನೆಗೆ ಎಲ್ಲವೂ ಜೈ ಶ್ರೀರಾಮ್ ಎಂದು ಆಕಾಶದತ್ತ ಮುಖ ಮಾಡಿ ಕೈ ಮುಗಿದು ಹೊರಟೆಬಿಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸವನಗೌಡ,ದೋಸ್ತಿಗಳು ಉತ್ಸವ ಆಚರಿಸಿದರೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಸರ್ಕಾರಕ್ಕೆ ಅಧಿಕಾರವೇ ಮುಖ್ಯವಾಗಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.