ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ದಿನವಿಡೀ ಬಿಟ್ಟುಬಿಡದೇ ಸುರಿದ ಮಳೆಗೆ ಸಮೀಪದ ಬ್ಯಾಲಕುಂದಿ ಗ್ರಾಮದ ಬಳಿ ಹಳ್ಳ ಬಂದು ಸಂಜೆ ಪಟ್ಟಣದಿಂದ ಯಶವಂತನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು
ಮರಿಯಮ್ಮನಹಳ್ಳಿ: ಪಟ್ಟಣದ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ದಿನವಿಡೀ ಬಿಟ್ಟು ಬಿಡದೇ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಬೆಳಿಗ್ಗೆ 10ಕ್ಕೆ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಹೊತ್ತು ಧಾರಾಕಾರವಾಗಿ ಸುರಿಯಿತು. ನಂತರ ಜಿಟಿಜಿಟಿ ಮಳೆ ಹತ್ತಿಕೊಂಡಿತು. ಮಧ್ಯಾಹ್ನ ಮತ್ತೆ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆ, ಸಂಜೆ ತನಕ ಬಿಟ್ಟುಬಿಡದೇ ಸುರಿಯಿತು.
ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಸಮೀಪದ ಬ್ಯಾಲಕುಂದಿ ಗ್ರಾಮದ ಬಳಿ ಸಂಜೆ 6ರ ಸುಮಾರಿಗೆ ಬಂದ ಭಾರಿ ಹಳ್ಳದಿಂದಾಗಿ ಪಟ್ಟಣದಿಂದ ಯಶವಂತನಗರ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಎರಡು ತಾಸಿಗೂ ಹೆಚ್ಚು ಕಾಲ ಸ್ಥಗಿತಗೊಂಡಿತು.
ಪಟ್ಟಣದಿಂದ ಯಶವಂತನಗರ, ಸಂಡೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದಾಗಿದ್ದರಿಂದ, ಎರಡೂ ಕಡೆ ವಾಹನ ಸವಾರರು, ರೈತರು ಹಾಗೂ ಜಾನುವಾರು ಪರದಾಡುವಂತಾಯಿತು.
ದಿನವಿಡೀ ಹತ್ತಿಕೊಂಡ ಮಳೆ ಒಂದೆಡೆಯಾದರೆ, ಇನ್ನೊಂದೆಡೆ ಹೊಸಪೇಟೆಯಲ್ಲಿ ನಡೆದ ಸಮಾವೇಶದಿಂದಾಗಿ ಪಟ್ಟಣದಲ್ಲಿ ಹಾದುಹೋದ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ-25 ಸೇರಿದಂತೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಅಪಾರ ಸಂಖ್ಯೆಯಲ್ಲಿ ಬಸ್ಗಳ ಸಂಚಾರ ದಟ್ಟಣೆಯಿಂದಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಆಗಾಗ ಟ್ರಾಫಿಕ್ ಜಾಮ್ ಉಂಟಾಗಿ ಜನ ತೊಂದರೆ ಪಡುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.