ಬಳ್ಳಾರಿ: ‘ಬಜೆಟ್ನಲ್ಲಿ ಕೊಟ್ಟಿರುವುದಕ್ಕಲ್ಲ, ಕೊಡದಿರುವುದರ ಬಗ್ಗೆ ನನಗೆ ತಕರಾರಿದೆ. ಯಾರಿಗೆ ಏನೂ ಸಿಕ್ಕಿಲ್ಲವೋ, ಅವರ ಪರ ನಾನು ಮಾತನಾಡುವೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
‘ಹಲಾಲ್ ಬಜೆಟ್’ ಎಂದು ಬಿಜೆಪಿಯವರು ಟೀಕಿಸಿರುವ ಬಗ್ಗೆ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ನಾಯಕರ ಟೀಕೆ ವೈಯಕ್ತಿಕವಾದದ್ದು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಎಲ್ಲರಿಗೂ ಎಲ್ಲವೂ ಸಿಗಬೇಕು ಎಂಬ ಅಭಿಪ್ರಾಯ ನನ್ನದು. ಒಟ್ಟಾರೆ, ಎಲ್ಲರಿಗೂ ಅನುಕೂಲವಾಗಬೇಕು’ ಎಂದರು.
‘ನಾನು ಬಿಜೆಪಿ ನಾಯಕನಾಗಿ ಮಾತನಾಡುತ್ತಿಲ್ಲ. ಅದರೆ, ನನ್ನ ಪ್ರಕಾರ ರಾಜ್ಯದ ಎಲ್ಲಾ ಸಮುದಾಯಗಳೂ ಒಂದೇ. ಹಿಂದುಳಿದವರು, ಪರಿಶಿಷ್ಟರು, ಮಹಿಳೆಯರು, ರೈತರು ಸೇರಿ ಯಾರನ್ನೂ ನಾವು ಉಪೇಕ್ಷಿಸಬಾರದು’ ಎಂದರು.
‘ಕಲ್ಯಾಣ ಕರ್ನಾಟಕದಲ್ಲಿ ಎಲ್ಲ ಜಾತಿ, ಧರ್ಮಗಳಿವೆ. ರಾಜಕೀಯವಾಗಿ ನೋಡಿದಾಗ, ಎಲ್ಲರನ್ನೂ ಒಟ್ಟಿಗೆ ಒಯ್ಯಬೇಕಾಗುತ್ತದೆ. ಹಾಗೆಂದು, ಈ ಬಜೆಟ್ನ್ನು ನಾನು ಸಮರ್ಥಿಸುವುದಿಲ್ಲ’ ಎಂದರು.
‘ನಾನು ಪಕ್ಷದ ರಾಷ್ಟ್ರೀಯ ನಾಯಕರ ಸಂಪರ್ಕದಲ್ಲಿದ್ದು, ದೂರವಾಣಿಯಲ್ಲಿ ಆಗಾಗ ಚರ್ಚಿಸುತ್ತೇನೆ. ರಾಜ್ಯಕ್ಕೆ ಬಂದ ಅಮಿತ್ ಶಾ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿಲ್ಲ. ಅವರನ್ನು ದೆಹಲಿಯಲ್ಲಿ ಭೇಟಿಯಾಗುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.