ಹೂವಿನಹಡಗಲಿ: ತಾಲ್ಲೂಕಿನ ಹರವಿ, ಕುರುವತ್ತಿ ಬಳಿ ತುಂಗಭದ್ರಾ ನದಿ ಪಾತ್ರದಲ್ಲಿನ ಮರಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂರು ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ನದಿಯಲ್ಲಿನ ಮರಳನ್ನು ತೆಪ್ಪಗಳ ಮೂಲಕ ದಡಕ್ಕೆ ಸಾಗಿಸಿ, ಅಲ್ಲಿಂದ ಲಾರಿಗಳಿಗೆ ತುಂಬಿಸಿ ನಗರ ಪ್ರದೇಶಗಳಿಗೆ ಕಳಿಸುವ ದಂಧೆ ಕೆಲ ದಿನಗಳಿಂದ ನಡೆಯುತಿತ್ತು. ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೊಳಲು ಸಮೀಪದ ಡೊಂಬರಹಳ್ಳಿ, ಬೂದನೂರು ಬಳಿ ಮರಳಿನ ಎರಡು ಟಿಪ್ಪರ್ ವಶಕ್ಕೆ ಪಡೆದು ಹಿರೇಹಡಗಲಿ ಠಾಣೆಗೆ ಒಪ್ಪಿಸಿದ್ದಾರೆ. ಕುರುವತ್ತಿಯಿಂದ ಹರಪನಹಳ್ಳಿ ಕಡೆಗೆ ಹೊರಟಿದ್ದ ಸ್ವರಾಜ್ ಮಜ್ಡಾ ಲಾರಿಯನ್ನು ವಶಕ್ಕೆ ಪಡೆದು, ಹರಪನಹಳ್ಳಿ ಠಾಣೆಗೆ ಒಪ್ಪಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಪಿ.ಮಲ್ಲಯ್ಯ, ಜಿ.ಮಂಜುನಾಥ, ಡಿ.ಆರ್.ಕಿರಣ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.