ಬಳ್ಳಾರಿ: ‘ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ಅನನ್ಯವಾದುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಗುರುವಾರ 73 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದ ಅವರು, ‘ಜಿಲ್ಲೆಯ ವಿವಿಧೆಡೆಯ ಹೋರಾಟಗಾರರು ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದರು.ಸ್ವಾತಂತ್ರ್ಯ ಹೋರಾಟವು ಇಂದಿನ ಯುವಪೀಳಿಗೆಗೆ ದೇಶಪ್ರೇಮ ಮತ್ತು ರಾಷ್ಟ್ರೀಯ ಭಾವೈಕ್ಯದ ಕುರಿತು ಜಾಗೃತಿ ಮೂಡಿಸುವ ಮಹಾನ್ ಘಟನೆ’ ಎಂದು ಬಣ್ಣಿಸಿದರು.
‘ಜಿಲ್ಲೆಯ ಟೇಕೂರು ಸುಬ್ರಹ್ಮಣ್ಯ, ಗೊರ್ಲಿ ಶರಣಪ್ಪ, ರುದ್ರಮ್ಮ, ತಿಮ್ಮಪ್ಪ, ವೆಂಕೋಬರಾವ್ ಸೇರಿದಂತೆ ಹೋರಾಟಗಾರರನ್ನು ಸ್ಮರಿಸಬೇಕಾಗಿದೆ. ಅವರ ಜೀವನ ವಿಧಾನವನ್ನು ಅರಿತು ನಡೆಯಬೇಕಾಗಿದೆ’ ಎಂದರು.
ಸನ್ಮಾನ: ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸುಪ್ರಿತಾ, ಬಿ.ಎಂ.ಅಫ್ರಿನ್, ಎಚ.ಕೆ.ಕಾವ್ಯ, ಕುಸುಮ, ಅನುಪಲ್ಲವಿ, ನಾಗರಾಜಗೌಡ ಅವರನ್ನು, ಸಾಧಕ ಈಜು ಕ್ರೀಡಾಪಟುಗಳಾದ ಉತ್ತೇಜ್, ಗೋಪಿಚಂದ್, ಯೋಜಿತ್ ಮತ್ತು ಪ್ರಶಾಂತ್, ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದ ಗೃಹರಕ್ಷಕ ದಳದ ಎಚ್.ತಿಪ್ಪೇಸ್ವಾಮಿ ಮತ್ತು ಎಸ್.ಎಂ.ಗಿರೀಶ ಸಂದರ್ಭದಲ್ಲಿ ಗಣ್ಯರು ಪುರಸ್ಕರಿಸಿದರು.
ಭಾಷಣಕ್ಕೂ ಮುನ್ನ ನಡೆದ ಪಥ ಸಂಚಲನದಲ್ಲಿ 45 ತುಕಡಿಗಳು ಪಾಲ್ಗೊಂಡಿದ್ದವು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಿ.ಭಾರತಿ, ಉಪಾಧ್ಯಕ್ಷೆ ಪಿ.ದೀನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಸಿ.ಕೆ.ಬಾಬಾ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಶಾಸಕರಾದ ಕೆ.ಸಿ.ಕೊಂಡಯ್ಯ, ಜಿ.ಸೋಮಶೇಖರ ರೆಡ್ಡಿ, ಸಂಸದ ವೈ.ದೇವೇಂದ್ರಪ್ಪ, ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.