ಹೊಸಪೇಟೆ: ‘ಭಾರತದ್ದು ಮೃತ್ಯುಂಜಯ ಸಂಸ್ಕೃತಿ. ಅದಕ್ಕೆ ಸಾವಿಲ್ಲ. ನಿರಂತರವಾದುದು’ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದರು.
ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಮಂಗಳವಾರ ರಾತ್ರಿ ಸಿರಿಗೇರಿ ಸಂಸ್ಥೆ ಹಾಗೂ ಅನ್ನಪೂರ್ಣ ಕ್ರಿಯೇಷನ್ಸ್ ಹಮ್ಮಿಕೊಂಡಿದ್ದ ‘ಬಳ್ಳಾರಿ ಕೋಟೆ’ ಸಾಕ್ಷ್ಯಚಿತ್ರದ ಸಿ.ಡಿ. ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಜನವರಿಯಲ್ಲಿ ಸಾಕ್ಷ್ಯಚಿತ್ರ, ದೃಶ್ಯ ಕಲೆಗೆ ಸಂಬಂಧಿಸಿದಂತೆ ಸ್ಪರ್ಧೆ ಆಯೋಜಿಸುವ ಚಿಂತನೆ ನಡೆದಿದೆ. ರಾಜ್ಯದ ಎಲ್ಲಾ ಸಾಂಸ್ಕೃತಿಕ, ಐತಿಹಾಸಿಕ ಕೇಂದ್ರಗಳನ್ನು ದೃಶ್ಯ ಮಾಧ್ಯಮದಲ್ಲಿ ಸೆರೆ ಹಿಡಿದು ಚಿತ್ರೀಕರಿಸಲಾಗುವುದು’ ಎಂದು ಹೇಳಿದರು.
‘ಬಸವಣ್ಣ ಹಾಗೂ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳದೇ ಕೇವಲ ಅವರನ್ನು ಆರಾಧಿಸುವ ಮೂಲಕ ಸಾಂಸ್ಕೃತಿಕ ಜವಾಬ್ದಾರಿಯಿಂದ ವಿಮುಖರಾಗಿದ್ದೇವೆ. ಮಹಾತ್ಮರನ್ನು ಕೇವಲ ದೈವಿ ಸ್ವರೂಪಕ್ಕೆ ಸೀಮಿತಗೊಳಿಸುರುವುದು ದುರದೃಷ್ಟಕರ’ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ, ಪ್ರಾಚಾರ್ಯ ಎಸ್.ಎಂ. ಶಶಿಧರ್, ಕಲಾ ನಿರ್ದೇಶಕ ಮಂಜುನಾಥ ಗೋವಿಂದವಾಡ ಸಾಕ್ಷ್ಯಚಿತ್ರ ನಿರ್ಮಾಪಕ–ನಿರ್ದೇಶಕ ಸಿರಿಗೇರಿ ಯರ್ರಿಸ್ವಾಮಿ ಇದ್ದರು. ಭೂಮಿಕಾ ಹಾಗೂ ನಮ್ರತಾ ನೇತೃತ್ವದ ತಂಡದ ನೃತ್ಯರೂಪಕ ಮನಸೂರೆಗೊಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.