ಸಾಂದರ್ಭಿಕ ಚಿತ್ರ
ಕಂಪ್ಲಿ: ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಸುಮಾರು 200ಕ್ಕು ಹೆಚ್ಚು ಜನರಿಗೆ ಮೊಣಕಾಲು ಶೂಲೆ, ಸಂಧಿವಾತ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.
ಗ್ರಾಮದ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ಈ ಕುರಿತಂತೆ ಭಾನುವಾರ ನಡೆದ ನಾಗರಿಕರ ಸಭೆಯಲ್ಲಿ, ಶುದ್ಧ ಕುಡಿಯುವ ನೀರಿನ ಕೊರತೆ ಅಥವಾ ಈ ಕಾಯಿಲೆಗೆ ಕಾರಣ ಯಾವುದು ಎಂದು ತಜ್ಞ ವೈದ್ಯರು ಭೇಟಿ ನೀಡಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮೊಣಕಾಲು ನೋವಿನಿಂದ ಬಳಲುತ್ತಿರುವ ಎಚ್.ಎಂ.ಶರಣಯ್ಯಸ್ವಾಮಿ ಮಾತನಾಡಿ, ಕಳೆದ ಒಂದು ವರ್ಷದಿಂದ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಮೊಣಕಾಲು ಬಾಧೆ ಅನುಭವಿಸುತ್ತಿದ್ದಾರೆ. ಈಚೆಗೆ 30 ವರ್ಷದ ಸ್ತ್ರೀ, ಪುರುಷರಿಗೂ ಸಹ ಈ ರೋಗ ವಿಪರೀತವಾಗಿ ಕಾಡುತ್ತಿದೆ. ಮೊಣಕಾಲು ಊದಿಕೊಂಡು ಕುಳಿತವರು ಬೇಗನೆ ಮೇಲೆಳೆಲು ತೊಂದರೆಪಡುವುದು ಸಾಮಾನ್ಯವಾಗಿದೆ. ಪ್ರಸ್ತುತ ಶೂಲೆ ಜನರನ್ನು ತೀಕ್ಷ್ಮಣವಾಗಿ ಪೀಡಿಸುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಟ್ಟೆ ವಿಜಯಮಹಾಂತೇಶ ಮಾತನಾಡಿ, ಚೌಡೇಶ್ವರಿಗುಡಿ ಪಕ್ಕದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಕ್ರಮ
ಕೈಗೊಳ್ಳಬೇಕು. ಗ್ರಾಮಕ್ಕೆ ಸದ್ಯ ಬೋರ್ ವೆಲ್ ನೀರು ಪೂರೈಯಾಗುತ್ತಿದೆ. ಬುಕ್ಕಸಾಗರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಗ್ರಾಮ ಒಳಪಟ್ಟಿದ್ದು, ಸಂಬಂಧಿಸಿದವರಾದರೂ ತುಂಗಭದ್ರಾ ನದಿಯಿಂದ ನೀರು ಶುದ್ದೀಕರಿಸಿ ಸರಬರಾಜು ಮಾಡಬೇಕು. ತಕ್ಷಣ ಗ್ರಾಮದಲ್ಲಿ ವಿಶೇಷ ಆರೋಗ್ಯ ಶಿಬಿರ ಆಯೋಜಿಸಿ ಮೊಣಕಾಲು ನೋವಿಗೆ ನಿಖರ ಕಾರಣ ಪತ್ತೆ ಹಚ್ಚುವಂತೆ ಒತ್ತಾಯಿಸಿದರು.
ಮುದ್ದಾಪುರ ಗ್ರಾಮದ ಜನರು ಮೊಣಕಾಲು ನೋವಿನ ಕಾರಣ ಕುರಿತು ಸಮೀಕ್ಷೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದುಡಾ.ಜಿ. ಅರುಣ್, ತಾಲ್ಲೂಕು ಆರೋಗ್ಯ ಮೇಲ್ವಿಚಾರಣ ಅಧಿಕಾರಿ, ಕಂಪ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.